ಜೈಪುರ: ದೂರವಾಣಿ ಕದ್ದಾಲಿಕೆಯಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬೆಂಬಲಿಗ ಶಾಸಕನ ಆರೋಪವನ್ನು ರಾಜಸ್ಥಾನ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಕಚಾರಿಯವಸ್ ತಳ್ಳಿ ಹಾಕಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ತೀವ್ರವಾಗಿ ಭುಗಿಲೆದ್ದಿದೆ. ಭಾನುವಾರದಂದು ಕೆಲವು ಶಾಸಕರ ದೂರವಾಣಿ ಕರೆಗಳು ಕದ್ದಾಲಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ವೇದ ಪ್ರಕಾಶ್ ಸೋಲಂಕಿ ಆರೋಪಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, 'ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂಬ ಬಗ್ಗೆ ಶಾಸಕರಿಗೆ ಮಾಹಿತಿಯಿದ್ದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ತಿಳಿಸಬೇಕು' ಎಂದಿದ್ದಾರೆ.
'ರಾಜ್ಯ ಸರ್ಕಾರವು ಯಾರ ಫೋನ್ ಅನ್ನು ಕದ್ದಾಲಿಕೆ ಮಾಡುವುದಿಲ್ಲ. ಇದು ನಮ್ಮ ಸ್ವಭಾವವಲ್ಲ. ಇಬ್ಬರು ಮೂವರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಶಾಸಕರೊಬ್ಬರು ಆರೋಪಿಸಿದ್ದಾರೆ. ಅಂತಹ ಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಅವರ ಗಮನಕ್ಕೆ ತರಬೇಕು' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಇಡೀ ದೇಶಕ್ಕೆ ಮಾದರಿ ರಾಜ್ಯವಾಗಿ ಕಾಂಗ್ರೆಸ್ ಕೆಲಸ ನಿರ್ವಹಿಸಿದೆ. ಅಲ್ಲದೆ ಶಾಸಕರು ನೀಡುವ ಅಂತಹ ಹೇಳಿಕೆಯನ್ನು ಸಮರ್ಥಿಸಲಾಗುವುದಿಲ್ಲ ಎಂದಿದ್ದಾರೆ.
ಸಚಿನ್ ಪೈಲಟ್ ಅವರ ಬೆಂಬಲಿಗರಾಗಿರುವ ಸೋಲಂಕಿ, ಶಾಸಕರನ್ನು ಹೆಸರಿಸದೇ ದೂರವಾಣಿ ಕದ್ದಾಲಿಕೆಯ ಬಗ್ಗೆ ಆರೋಪ ಮಾಡಿದ್ದರು. ಅಲ್ಲದೆ ಶಾಸಕರಿಗೆ ವಿವಿಧ ಏಜೆನ್ಸಿಗಳಿಂದ ಸಿಲುಕಿಸುವ ಭಯವಿದೆ ಎಂದಿದ್ದರು.