ನವದೆಹಲಿ: ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಆಮ್ಲಜನಕ ಸಾಂದ್ರಕಗಳ ಮೇಲೆ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್ಟಿ) ವಿಧಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿದ್ದ ದೆಹಲಿ ಹೈಕೋರ್ಟ್ನ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಷಾ ಅವರ ವಿಶೇಷ ನ್ಯಾಯಪೀಠವು ಹೈಕೋರ್ಟ್ನಲ್ಲಿ ಈ ಕುರಿತು ಪಿಐಎಲ್ ಸಲ್ಲಿಸಿದ್ದವರಿಗೆ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿತು.
‘ಮುಂದಿನ ಆದೇಶದವರೆಗೆ, ದೆಹಲಿ ಹೈಕೋರ್ಟ್ನ ಈ ಕುರಿತ ಆದೇಶಕ್ಕೆ ತಡೆ ನೀಡಲಾಗಿದೆ’ ಎಂದು ನ್ಯಾಯಪೀಠ ತಿಳಿಸಿತು.
ಜೂನ್ 8ರಂದು ಜಿಎಸ್ಟಿ ಮಂಡಳಿ ಸಭೆ ನಡೆಯಲಿದ್ದು, ಆಮ್ಲಜನಕ ಸಾಂದ್ರಕಗಳು ಸೇರಿದಂತೆ ಕೋವಿಡ್ಗೆ ಸಂಬಂಧಿಸಿದ ಅಗತ್ಯ ಸರಕುಗಳಿಗೆ ವಿನಾಯಿತಿ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ನ್ಯಾಯಪೀಠದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ತಡೆಯಾಜ್ಞೆ ನೀಡಲಾಗಿದೆ.