ನವದೆಹಲಿ: ದ್ವೇಷ ಭಾಷಣದ ಕುರಿತು ಸರ್ಕಾರಗಳು ವಹಿಸುತ್ತಿರುವ ಮೌನವು ಜನರಿಗೆ ಪ್ರೋತ್ಸಾಹದಾಯಕವಾಗಿ ಪರಿಣಮಿಸಿದೆ ಎಂದು ದೆಹಲಿಯ ಜಮಾತ್–ಎ–ಇಸ್ಲಾಮಿ ಹಿಂದ್ (ಜೆಐಎಚ್) ಸಂಘಟನೆಯು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಜೆಐಎಚ್ನ ಉಪಾಧ್ಯಕ್ಷ ಸಲೀಂ ಎಂಜಿನಿಯರ್, ದ್ವೇಷ ಭಾಷಣ ಕುರಿತು ಸುಪ್ರೀಂ ಕೋರ್ಟ್ನ ಇತ್ತೀಚಿನ ನಿರ್ದೇಶನಗಳನ್ನು ಉಲ್ಲೇಖಿಸಿ ಅಂಥ ಜನರ ವಿರುದ್ಧ ಪಕ್ಷ ಮತ್ತು ಧರ್ಮಾತೀತವಾಗಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
‘ಬಹಳಷ್ಟು ಜನರು ದ್ವೇಷ ಭಾಷಣವನ್ನು ತಮ್ಮ ರಾಜಕೀಯ ಭವಿಷ್ಯ ಇಲ್ಲವೇ ಬೆಳವಣಿಗೆಗಾಗಿ ಬಳಸುತ್ತಿದ್ದಾರೆ’ ಎಂದ ಅವರು, ಈ ವಿಷಯದ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೂ ಮನವಿ ಮಾಡಿದ್ದೇನೆ ಎಂದಿದ್ದಾರೆ.
‘ದ್ವೇಷ ಭಾಷಣಗಳ ಕುರಿತು ಸರ್ಕಾರಗಳು ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಆದರೆ, ಈ ವಿಚಾರದ ಕುರಿತು ಸರ್ಕಾರಗಳ ಕ್ರಮಗಳು ತುಂಬಾ ನಿರಾಶದಾಯಕವಾಗಿವೆ’ ಎಂದು ಹೇಳಿದ್ದಾರೆ.