ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ, ಶಾಸಕ ಉದಯನಿಧಿ ಸ್ಟಾಲಿನ್ ಅವರು ಮುಂದಿನ ವಾರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ‘ಎನ್ಡಿಟಿವಿ‘ ವರದಿ ಮಾಡಿದೆ.
ಚೆಪಾಕ್–ತಿರುವಲ್ಲಿಕೇನಿ ಕ್ಷೇತ್ರದ ಶಾಸಕರಾಗಿರುವ ಉದಯನಿಧಿ ಅವರು, ಚಿತ್ರನಟರೂ ಆಗಿರುವುದರಿಂದ ರಾಜ್ಯಾದ್ಯಂತ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.
ಸದ್ಯ ಡಿಎಂಕೆ ಯುವ ಘಟಕದ ರಾಜ್ಯ ಕಾರ್ಯದರ್ಶಿ ಆಗಿರುವ ಉದಯನಿಧಿ ಅವರು, ಗ್ರಾಮೀಣಾಭಿವೃದ್ಧಿ ಹಾಗೂ ವಿಶೇಷ ಕಾರ್ಯಕ್ರಮ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಬಹದು ಎನ್ನುವುದು ಮೂಲಗಳಿಂದ ಸಿಕ್ಕ ಮಾಹಿತಿ.
ಕಳೆದ ವರ್ಷ ನಡೆದ ತಮಿಳುನಾಡು ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿದ್ದ ಉದಯನಿಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.
ಉದಯನಿಧಿ ಅವರಿಗೆ ಈ ಹಿಂದೆಯೇ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಸಿನಿಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಈಗ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.