ನವದೆಹಲಿ: ದೆಹಲಿಯ ಗಡಿ ಭಾಗಗಳಲ್ಲಿ ಕೃಷಿ ಕಾಯ್ದೆಗಳ ರದ್ದುಗೊಳಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡರು.
ಈ ಮೂಲಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನೂರು ದಿನಗಳಿಗೂ ಹೆಚ್ಚು ಕಾಲದಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿದ್ದ ಸಾವಿರಾರು ಮಹಿಳೆಯರು ದೆಹಲಿ – ಹರಿಯಾಣ ಗಡಿ ಭಾಗದಲ್ಲಿ ಸೇರಿ, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಘೋಷಣೆ ಕೂಗಿದರು. ನಂತರ ಮೆರವಣಿಗೆ ನಡೆಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಪಂಜಾಬ್ನ ವೀಣಾ, ‘ಅಂತರರಾಷ್ಟ್ರೀಯ ಮಹಿಳಾ ದಿನ ಎನ್ನುವುದು ಮಹಿಳಾ ಶಕ್ತಿಯನ್ನು ಪ್ರತಿನಿಧಿಸುವ ಪ್ರಮುಖ ದಿನವಾಗಿದೆ. ಮಹಿಳೆಯರು ಒಟ್ಟಾಗಿದ್ದರೆ, ಅಂದುಕೊಂಡಿದ್ದನ್ನು ಬಹು ಬೇಗ ಸಾಧಿಸಬಹದು‘ ಎಂದರು.
ಹರಿಯಾಣ ರಾಜ್ಯದ ದೆಹಲಿಯ ಗಡಿಯಲ್ಲಿ 20,000 ಕ್ಕೂ ಹೆಚ್ಚು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದಾಗಿ ಪೊಲೀಸರು ಮತ್ತು ಆಯೋಜಕರು ತಿಳಿಸಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ಕವಿತಾ ಕುರುಗುಂಟಿ ಮಾತನಾಡಿ, ‘ಈ ದಿನ ಪ್ರತಿಭಟನೆಯಲ್ಲಿ ಮಹಿಳೆಯರೇ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸ್ತ್ರೀವಾದವನ್ನು ಬೆಂಬಲಿಸುವ ಹಲವಾರು ವ್ಯಕ್ತಿಗಳು ಇಲ್ಲಿ ಸೇರಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಿಂದ ರೈತ ಮಹಿಳೆಯರಿಗೆಏನೆಲ್ಲ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತದೆ‘ ಎಂದು ಹೇಳಿದರು.
‘ದೇಶದ ಕೃಷಿಯಲ್ಲಿ ಮಹಿಳೆಯರ ಕೊಡುಗೆ ಏನು ಮತ್ತು ಈ ರೈತ ಚಳವಳಿಯಲ್ಲಿ ಮಹಿಳೆಯರ ಪಾತ್ರ ಏನು ಎಂಬುದನ್ನು ತೋರಿಸುವುದಕ್ಕೆ ಇದೊಂದು ಸೂಕ್ತ ಸಂದರ್ಭವಾಗಿದೆ‘ ಎಂದು ಕವಿತಾ ಹೇಳಿದರು.