ಪುಣೆ: ಸೀರಂ ಇನ್ಸ್ಟಿಟ್ಯೂಟ್ನಲ್ಲಿ ಸಂಭವಿಸಿದ ಅಗ್ನಿ ಅವಘಡ ಕುರಿತಂತೆ ಮೂರು ಪ್ರತ್ಯೇಕ ಸಂಸ್ಥೆಗಳು ಒಟ್ಟಾಗಿ ತನಿಖೆ ನಡೆಸಲಿವೆ. ಅಗ್ನಿ ಅವಘಡದ ಹಿಂದಿನ ಕಾರಣಗಳನ್ನು ತಿಳಿಯಲು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.
ಪುಣೆ ನಗರಸಭೆಯ (ಪಿಎಂಸಿ) ಅಗ್ನಿಶಾಮಕ ಇಲಾಖೆ, ಪುಣೆ ಮಹಾನಗಗರ ವಲಯ ಅಭಿವೃದ್ಧಿ ಪ್ರಾಧಿಕಾರ (ಪಿಎಂಆರ್ಡಿಎ) ಮತ್ತು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (ಎಂಐಡಿಸಿ) ಜಂಟಿ ತನಿಖೆಯನ್ನು ನಡೆಸಲಿವೆ.
ಇಲ್ಲಿನ ಐದು ಮಹಡಿಯ ಕಟ್ಟಡದಲ್ಲಿರುವ ಸೀರಂ ಇನ್ಸ್ಟಿಟ್ಯೂಟ್ ಆವರಣದಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಗುತ್ತಿಗೆ ನೌಕರರು ಮೃತಪಟ್ಟಿದ್ದರು. ಮೇಲಿನ ಎರಡು ಮಹಡಿಯಲ್ಲಿ ಅವಘಡದ ಪರಿಣಾಮ ತೀವ್ರವಾಗಿತ್ತು.
ಪಿಎಂಆರ್ಡಿಎ ಮುಖ್ಯ ಅಗ್ನಿಶಾಮಕ ಅಧಿಕಾರಿ ದೇವೇಂದ್ರ ಪೋಟ್ಪೊಡೆ ಅವರು, ದುರಂತದ ಹಿಂದಿನ ಕಾರಣ ತಿಳಿಯಲು ಮೂರು ಸಂಸ್ಥೆಗಳು ಒಟ್ಟಾಗಿ ತನಿಖೆ ನಡೆಸುತ್ತಿವೆ ಎಂದು ತಿಳಿಸಿದರು.
ಈ ಮಧ್ಯೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಮತ್ತು ಅಗ್ನಿ ಅವಘಡ ಕುರಿತಂತೆ ಪ್ರಕರಣ ದಾಖಲಾಗಿದೆ ಎಂದು ಉಪ ಪೊಲೀಸ್ ಕಮಿಷನರ್ ನಮ್ರತಾ ಪಾಟೀಲ್ ತಿಳಿಸಿದ್ದಾರೆ.