ಅಹಮದಾಬಾದ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ವಲಯದ ಗಣ್ಯರು, ಕುಟುಂಬಸ್ಥರು ಹಾಗೂ ಸಂಬಂಧಿಗಳು ಗುಜರಾತ್ನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರಿಗೆ ಶುಕ್ರವಾರ ಅಂತಿಮ ನಮನ ಸಲ್ಲಿಸಿದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಶುಭಾಯ್ ಪಟೇಲ್ (92) ಅವರು ಗುರುವಾರ ನಿಧನರಾಗಿದ್ದರು.
ಕೇಶುಭಾಯ್ ಪಟೇಲ್ 1995ರಲ್ಲಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ನಂತರ 1998 –2001ರ ಅವಧಿಯಲ್ಲಿ ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು.
ಪಟೇಲ್ಅವರು ಆರು ಬಾರಿ ಗುಜರಾತ್ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2012ರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಪಟೇಲ್ ಅವರು ಆ ವರ್ಷ ಬಿಜೆಪಿಯನ್ನು ತೊರೆದು, ಗುಜರಾತ್ ಪರಿವರ್ತನ ಪಕ್ಷವನ್ನು ಸ್ಥಾಪಿಸಿದರು. ನಂತರ 2014ರಲ್ಲಿ ಆ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರು.
1928 ರಲ್ಲಿ ಜುನಾಗಢ ಜಿಲ್ಲೆಯ ವಿಶಾವದಾರ್ ಪಟ್ಟಣದಲ್ಲಿ ಜನಿಸಿದ ಕೇಶುಭಾಯ್ ಪಟೇಲ್ ಅವರು, 1945 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್ಎಸ್ಎಸ್) ಪ್ರಚಾರಕರಾಗಿ ಸೇರಿದರು. ಅವರು ಜನ ಸಂಘದ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.
ಕನೋಡಿಯಾ ಕುಟುಂಬಸ್ಥರಿಗೆ ಸಂತಾಪ: ಇತ್ತೀಚಿಗೆ ನಿಧನರಾದ ಹಿರಿಯ ರಾಜಕಾರಣಿ, ನಟ ನರೇಶ್ ಕನೋಡಿಯಾ (77), ಮಹೇಶ್ ಕನೋಡಿಯಾ (83) ಅವರ ಕುಟುಂಬಸ್ಥರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಇಬ್ಬರೂ ಸಹೋದರರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ನರೇಶ್ ಕನೋಡಿಯಾ ಮಾಜಿ ಶಾಸಕರಾಗಿದ್ದರೆ, ಮಹೇಶ್ ಕನೋಡಿಯಾ ಬಿಜೆಪಿ ಸಂಸದರಾಗಿ ಸೇವೆ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.