ಮುಂಬೈ: ನೆರೆ ರಾಜ್ಯವಾದ ಕರ್ನಾಟಕದ ಜೊತೆಗಿನ ಗಡಿ ವಿವಾದಕ್ಕೆ ಸಂಬಂಧಿಸಿದ ಪುಸ್ತಕವೊಂದರ ಬಿಡುಗಡೆಗೆ ಪಕ್ಷಾತೀತವಾಗಿ ಮಹಾರಾಷ್ಟ್ರದ ಎಲ್ಲ ಪಕ್ಷದ ಪ್ರಮುಖ ನಾಯಕರು ಬುಧವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮರಾಠಿಯಲ್ಲಿ ಇರುವ ‘ಮಹಾರಾಷ್ಟ್ರ ಕರ್ನಾಟಕ ಸೀಮಾವಾದ್: ಸಂಘರ್ಷ್ ಅನಿ ಸಂಕಲ್ಪ್’ ಹೆಸರಿನ 530 ಪುಟಗಳ ಈ ಕೃತಿಯು, ಈ ವಿಷಯದ ಕುರಿತು ಮಹಾರಾಷ್ಟ್ರದ ನಿಲುವಿನ ಬಗ್ಗೆ ವಿಸ್ತೃತ ವಿವರಣೆಯನ್ನು ಹೊಂದಿದೆ. ಪುಸ್ತಕವು ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರು ರಚಿಸಿರುವ ವ್ಯಂಗ್ಯಚಿತ್ರಗಳೂ ಒಳಗೊಂಡಿವೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಈ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅಧ್ಯಕ್ಷತೆ ವಹಿಸಲಿದ್ದಾರೆ.ಮಹಾವಿಕಾಸ ಅಘಾಡಿ ಸರ್ಕಾರದ ಪ್ರಮುಖ ನಾಯಕರು ಹಾಗೂ ವಿರೋಧ ಪಕ್ಷವಾದ ಬಿಜೆಪಿಯ ನಾಯಕ ದೇವೇಂದ್ರ ಫಡಣವೀಸ್ ಸೇರಿದಂತೆ ಇತರೆ ನಾಯಕರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
‘1956ರಿಂದ ಹಿಡಿದು 2021ರವರೆಗೆ ಗಡಿ ವಿಷಯಕ್ಕೆ ಸಂಬಂಧಿಸಿದ ವಿಸ್ತೃತ ಮಾಹಿತಿಯನ್ನು ಈ ಪುಸ್ತಕ ಒದಗಿಸಲಿದೆ ಎಂದು ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ವಿಶೇಷ ಕರ್ತವ್ಯಾಧಿಕಾರಿ ದೀಪಕ್ ಪವಾರ್ ಹೇಳಿದರು. ‘ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಯಕರ ಭಾಷಣ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಚರ್ಚೆಗಳು, ಸುಪ್ರೀಂ ಕೋರ್ಟ್ನಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಿಲುವು ಈ ಕೃತಿಯಲ್ಲಿದ್ದು, ಮುಂದಿನ ಪೀಳಿಗೆಗೆ ಒಂದು ರೀತಿಯ ದಾಖಲೆಯಂತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.