ಮುಂಬೈ: ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದೀಪಾವಳಿಯ ನಂತರ ಶಾಲೆಗಳನ್ನು ತೆರೆಯಲು ಯೋಚಿಸಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಈ ವಿಚಾರವಾಗಿ ಭಾನುವಾರ ವಿಡಿಯೊ ಸಂವಾದದಲ್ಲಿ ಮಾತನಾಡಿರುವ ಅವರು, 'ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ದೀಪಾವಳಿಯ ನಂತರ ಶಾಲೆಗಳನ್ನು ಆರಂಭಿಸಲು ನಾವು ಯೋಚಿಸಿದ್ದೇವೆ. ಧಾರ್ಮಿಕ ಸ್ಥಳಗಳನ್ನು ತೆರೆಯಲು ಸಹ ಅವಕಾಶ ನೀಡಲಾಗುವುದು' ಎಂದು ಹೇಳಿದ್ದಾರೆ.
'ವಾಯು ಮಾಲಿನ್ಯವು ಕೊರೊನಾ ಸೋಂಕಿತರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಆ ಕಾರಣ ದೀಪಾವಳಿ ಸಂದರ್ಭದಲ್ಲಿ ಜನರು ಪಟಾಕಿ ಸಿಡಿಸಬಾರದು. ಮನೆಗಳಲ್ಲಿ ದೀಪ ಬೆಳಗುವ ಮೂಲಕ ಹಬ್ಬ ಆಚರಿಸಬೇಕು. ದೀಪಾವಳಿಯ ನಂತರದ 15 ದಿನಗಳು ಬಹಳ ಪ್ರಮುಖವಾಗಿವೆ. ಮತ್ತೆ ಲಾಕ್ಡೌನ್ ಅನ್ನು ಹೇರುವ ಸ್ಥಿತಿ ಬರುವುದು ಬೇಡ' ಎಂದು ಉದ್ದವ್ ಠಾಕ್ರೆ ಜನರಲ್ಲಿ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರವು ಭಾರತದ ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿದ್ದು, ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ.
Pollution can increase the impact of #COVID19. I appeal to people to not burn firecrackers rather lit earthen lamps. 15 days post-Diwali will be crucial, we should be cautious so that the need for lockdown does not arise again: Maharashtra Chief Minister Uddhav Thackeray https://t.co/Jnfb5xshDT