ನವದೆಹಲಿ: ಭಾರತ ಒಕ್ಕೂಟವೋ ಅಥವಾ ಕೇಂದ್ರ ಸರ್ಕಾರವೋ? ವಿರೋಧಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಇಂಥದೊಂದು ಪ್ರಶ್ನೆ ಎತ್ತಿದ್ದರು.
ಈ ಮುಖಂಡರ ಮಾತಿಗೆ ಬೆಂಬಲ ಎಂಬಂತೆ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಂಸದೀಯ ಸಮಿತಿಯು ‘ಭಾರತ ಒಕ್ಕೂಟ’ ಎಂಬ ವಾದಕ್ಕೇ ಒತ್ತು ನೀಡಿದೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ವಿಷಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಗುರುವಾರ ಮಂಡಿಸಲಾದ ಸಚಿವಾಲಯದ ಅನುದಾನ ಕುರಿತ ವರದಿಯಲ್ಲಿ ಈ ವಾದವನ್ನು ಉಲ್ಲೇಖಿಸಿದೆ.
ಕೇಂದ್ರ ಸರ್ಕಾರ ಬಳಕೆಗೆ ಪರ್ಯಾಯವಾಗಿ ಭಾರತ ಒಕ್ಕೂಟ ಎಂದೇ ಬಳಸಬೇಕು. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರಿಗಳನ್ನು ಭಾರತ ಒಕ್ಕೂಟದ ಅಧಿಕಾರಿಗಳು ಎಂದೇ ಉಲ್ಲೇಖಿಸಬೇಕು ಎಂದು ಹೇಳಿದೆ.
ಇದಕ್ಕೆ ಪ್ರತಿಯಾಗಿ ಸಚಿವಾಲಯವು ಸಮಿತಿಗೆ ‘ಸ್ಪಷ್ಟವಾಗಿ’, ಇದು ನಿಮ್ಮ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಪ್ರತಿಕ್ರಿಯಿಸಿದೆ.
ಈ ಪ್ರತಿಕ್ರಿಯೆಯನ್ನು ಲಘುವಾಗಿ ಪರಿಗಣಿಸದ ಸಮಿತಿಯು ತನ್ನ ಮತ್ತು ಸಚಿವಾಲಯಾದ ಮನಸ್ಸಾಕ್ಷಿಗೆ ಅನುಗುಣವಾಗಿ, ಸಮಿತಿಯ ಶಿಫಾರಸುಗಳು ‘ಪರಿಮಿತಿಯಲ್ಲಿಯೇ’ ಅಂದರೆ ಸಂವಿಧಾನ ಮತ್ತು ಸಮಿತಿಯ ನಿಯಮಗಳ ವ್ಯಾಪ್ತಿಯಲ್ಲಿಯೇ ಇವೆ ಎಂದು ಹೇಳಿದೆ.