ಝಾನ್ಸಿ, ಉತ್ತರಪ್ರದೇಶ: ಬೇರೆ ಮಾರ್ಗದ ರೈಲು ಹತ್ತಿದ ಆತಂಕದಲ್ಲಿ ಐವರು ಪ್ರಯಾಣಿಕರು ಚಲಿಸುವ ರೈಲಿನಿಂದ ಜಿಗಿದ ಪರಿಣಾಮ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮೃತ ಪ್ರಯಾಣಿಕನನ್ನು ಗೋರಖ್ಪುರದ ದೇವಕಲಿ ಗ್ರಾಮದ ನಿವಾಸಿ ಅಜಯ್ ಕುಮಾರ್ (35) ಎಂದು ಗುರುತಿಸಲಾಗಿದೆ. ಇವರ ಸಹೋದರ ವಿಜಯ್, ಚಿಕ್ಕಪ್ಪ ಜಗಮೋಹನ್ ಮತ್ತು ಅವರ ಒಡನಾಡಿಗಳಾದ ಸಂದೀಪ್ ಮತ್ತು ಸಂಜಯ್ ಗಾಯಗೊಂಡಿದ್ದಾರೆ. ಇವರು ಆಂಧ್ರಪ್ರದೇಶಕ್ಕೆ ಹೋಗಲು ಝಾನ್ಸಿಗೆ ಬಂದಿದ್ದರು ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರ ರಾತ್ರಿ 12.30ರ ಸುಮಾರಿಗೆ ಅವರೆಲ್ಲರೂ ದೆಹಲಿ– ಆಂಧ್ರಪ್ರದೇಶ ಎಕ್ಸ್ಪ್ರೆಸ್ಗೆ ಹತ್ತಿದ್ದು, ರೈಲು ಆಂಧ್ರಪ್ರದೇಶಕ್ಕೆ ಹೋಗಲಿದೆ ಎಂದು ಭಾವಿಸಿದ್ದರು. ಆದರೆ ಅದು ನವದೆಹಲಿಗೆ ಹೋಗುತ್ತಿದೆ ಎಂದು ತಿಳಿದಾಗ ಅವರು ಭಯಭೀತರಾಗಿ ಚಲಿಸುವ ರೈಲಿನಿಂದ ಕೆಳಕ್ಕೆ ಜಿಗಿದರು ಎಂದು ಮೂಲಗಳು ತಿಳಿಸಿವೆ.
ರೈಲಿನಿಂದ ಕೆಳಗೆ ಬಿದ್ದ ನಂತರ ಅಜಯ್ ಸ್ಥಳದಲ್ಲೇ ಮೃತಪಟ್ಟರೆ, ಇತರರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.