ಡೆಹ್ರಾಡೂನ್: ಉತ್ತರಾಖಂಡ ಬಿಜೆಪಿಯ ಘಟಕದ ಕೋರ್ ಕಮಿಟಿ ಸಭೆ ದಿಢೀರ್ ನಡೆದಿದ್ದು, ಸರ್ಕಾರದಲ್ಲಿ ಮಹತ್ವದ ಬದಲಾವಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯಾಗಬಹುದು ಅಥವಾ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎನ್ನುವ ವರದಿಗಳು ದಟ್ಟವಾಗಿವೆ.
ಶನಿವಾರ ಸಂಜೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಛತ್ತೀಸಗಡ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಉಸ್ತುವಾರಿ ದುಷ್ಯಂತ್ ಕುಮಾರ್ ಗೌತಮ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
ಗೈರಸೈನ್ ನಗರದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಈ ಸಭೆ ನಡೆಸಿರುವುದರಿಂದ ಮಹತ್ವ ಪಡೆದಿದೆ. ಕೋರ್ ಕಮಿಟಿ ಸಭೆಗಾಗಿ ಬಿಜೆಪಿ ಶಾಸಕರನ್ನು ಗೈರಸೈನ್ನಿಂದ ಡೆಹ್ರಾಡೂನ್ಗೆ ಕರೆಯಿಸಿಕೊಳ್ಳಲಾಯಿತು. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಹ ಅವಸರದಲ್ಲೇ ದೌಡಾಯಿಸಿ ಡೆಹ್ರಾಡೂನ್ಗೆ ಬಂದರು.
ಕೋರ್ ಕಮಿಟಿ ಸದಸ್ಯರ ಜತೆ ಪ್ರತ್ಯೇಕವಾಗಿ ರಮಣ್ ಸಿಂಗ್ ಮಾತುಕತೆ ನಡೆಸಿ ಅಭಿಪ್ರಾಯಗಳನ್ನು ಪಡೆದರು.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬನ್ಸಿಧಾರ್ ಭಾಗತ್, ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಮತ್ತು ಶಾಸಕರಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ’ ಎಂದು ಹೇಳಿದ್ದಾರೆ.
‘ಬಿಜೆಪಿ ಸರ್ಕಾರ ನಾಲ್ಕು ವರ್ಷ ಪೂರೈಸಿರುವುದರಿಂದ 70 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ತಿಳಿಸಿದ್ದಾರೆ.