ನವದೆಹಲಿ: ಗಡಿ ಕಾಯುವ ಯೋಧರ ಬಲಿದಾನವನ್ನು ಕೇಂದ್ರ ಸರ್ಕಾರ ಅವಮಾನಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಗಡಿಯಲ್ಲಿ ಭಾರತ-ಚೀನಾ ಸೇನೆ ಹಿಂತೆಗೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಸಭೆಯಲ್ಲಿ ನಡೆಸಿದ ಭಾಷಣದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತ-ಚೀನಾ ಗಡಿಯಲ್ಲಿ 'ಯಥಾಪೂರ್ವ ಸ್ಥಿತಿ' ಪುನಃಸ್ಥಾಪಿಸದಿದ್ದರೆ ಶಾಂತಿ ಹಾಗೂ ನೆಮ್ಮದಿ ಇರುವುದಿಲ್ಲ ಎಂದು ಹೇಳಿದರು.
No status quo ante = No peace & tranquility.
Why is GOI insulting the sacrifice of our jawans & letting go of our territory?
ಈ ಮೊದಲು ರಾಜ್ಯಸಭೆಗೆ ಮಾಹಿತಿ ನೀಡಿರುವ ರಾಜನಾಥ್ ಸಿಂಗ್, ಪೂರ್ವ ಲಡಾಕ್ನ ಪ್ಯಾಂಗೊಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯಲ್ಲಿ ನಿಯೋಜಿಸಲಾಗಿರುವ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಭಾರತ ಹಾಗೂ ಚೀನಾ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದರು.
ಕಳೆದ ವರ್ಷ ಏಪ್ರಿಲ್-ಮೇ ತಿಂಗಳಿಂದ ವಾಸ್ತವನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಸಂಘರ್ಷ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ಸೇನೆಯು ಮಿಲಿಟರಿ ಬಲ ವೃದ್ಧಿಸಿದಾಗ ಭಾರತವು ಸೈನ್ಯ ನಿಯೋಜಿಸುವ ಮೂಲಕ ತಕ್ಕ ಉತ್ತರ ನೀಡಿತ್ತು.