ನವದೆಹಲಿ: ‘ಕೋವಿಡ್–19 ಸಾಂಕ್ರಾಮಿಕ ಕಾಯಿಲೆ ‘ಭಗವಂತನ ಆಟ’. ಇದು ಅನಿರೀಕ್ಷಿತ ನಷ್ಟವನ್ನುಂಟು ಮಾಡಿದ್ದು, ಪ್ರಸಕ್ತ ಆರ್ಥಿಕತೆ ಮೇಲೆ ಅಪಾರ ಪರಿಣಾಮ ಬೀರಿದೆ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ.
’ಕೊರೊನಾ ವೈರಸ್ ಸಾಂಕ್ರಾಮಿಕ ಹಬ್ಬುವ ಮುನ್ನವೇ ಆರ್ಥಿಕತೆ ಹದಗೆಟ್ಟಿದ್ದ ಬಗ್ಗೆ ಹಣಕಾಸು ಸಚಿವರು ಉತ್ತರ ನೀಡುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.
‘2017–18, 2018–19 ಮತ್ತು 2019–20ರ ಹಣಕಾಸು ವರ್ಷಗಳಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಅಸಮರ್ಪಕವಾಗಿ ನಿರ್ವಹಿಸಲಾಗಿತ್ತು. ದೇವರ ಸಂದೇಶ ದೂತರಾಗಿರುವ ಹಣಕಾಸು ಸಚಿವರು ಈ ಬಗ್ಗೆ ಉತ್ತರ ನೀಡುತ್ತಾರೆಯೇ’ ಎಂದು ಕೇಳಿದ್ದಾರೆ.
‘ಜಿಎಸ್ಟಿ ವಿಷಯದಲ್ಲೂ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ರಾಜ್ಯ ಸರ್ಕಾರಗಳಿಗೆ ದೊರೆಯಬೇಕಾದ ಪಾಲು ನೀಡುತ್ತಿಲ್ಲ’ ಎಂದು ಚಿದಂಬರಂ ಟೀಕಿಸಿದ್ದಾರೆ.