ನವದೆಹಲಿ: ಕಳೆದ ಐದು ದಶಕಗಳಿಂದ ರೈತರ ಸೇವೆ ಮಾಡುತ್ತಿರುವ ಕೆಎಂಎಫ್ನ ಕಾರ್ಯ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತರಪ್ರದೇಶದ ಗ್ರೇಟರ್ ನೋಯಿಡಾದಲ್ಲಿ ಸೋಮವಾರ ಆರಂಭವಾದ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಕೆಎಂಎಫ್ನ ನಂದಿನಿ ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿದ ಅವರು ಮಾತನಾಡಿದರು.
ಹೈನುಗಾರಿಕೆಯನ್ನೇ ಅವಲಂಬಿತರಾಗಿರುವ ರೈತ ಸಮುದಾಯ ಅದರಲ್ಲೂ ವಿಶೇಷವಾಗಿ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬಿ ಬದುಕಿಗೆ ವಿಶೇಷ ಯೋಜನೆಗಳನ್ನು ರೂಪಿಸುವಂತೆ ಮೋದಿ ಅವರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಲಹೆ ನೀಡಿದರು.
ಕೆಎಂಎಫ್ ಕಾರ್ಯಚಟುವಟಿಕೆಗಳ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿ, ‘ಕರ್ನಾಟಕದಲ್ಲಿ 15,043 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, 16 ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳನ್ನು ಹೊಂದಿದೆ. 26 ಲಕ್ಷ ಹಾಲು ಉತ್ಪಾದಕ ಸದಸ್ಯರಿದ್ದು, 10 ಲಕ್ಷ ಹಾಲು ಸರಬರಾಜುದಾರರು ಇದ್ದಾರೆ. 91.88 ಲಕ್ಷ ಕೆ.ಜಿ ಗರಿಷ್ಠ ಶೇಖರಣೆ ಹೊಂದಿದೆ. ಪ್ರತಿದಿನ ₹30 ಕೋಟಿಯನ್ನು ರೈತರಿಗೆ ಹಣ ಪಾವತಿ ಮಾಡುತ್ತಿದೆ’ ಎಂದರು.
ಕೆಎಂಎಫ್ ಆಡಳಿತ ಮಂಡಳಿ ಸದಸ್ಯರು, ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಒಕ್ಕೂಟಗಳ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕೆಎಂಎಫ್ನ ‘ಕ್ಷೀರಭಾಗ್ಯ’ ಯೋಜನೆಯು ಪ್ರಶಸ್ತಿ ಗಳಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.