ಲಖನೌ:ಉತ್ತರ ಪ್ರದೇಶದ ನೂತನ ಸಚಿವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ. ಆದರೆ ಬಹುಪಾಲು ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಗೃಹ, ವಿಚಕ್ಷಣೆ, ಕಂದಾಯ, ಪ್ರಧಾನ ಆಡಳಿತ, ಮಾಹಿತಿ, ಎಸ್ಟೇಟ್ ಅಭಿವೃದ್ಧಿ, ಸಾಂಸ್ಥಿಕ ಹಣಕಾಸು, ಸಚಿವಾಲಯ ಆಡಳಿತ, ಗಣಿಗಾರಿಕೆ, ಆಹಾರ ಭದ್ರತೆ, ನಿವೇಶನ, ನಾಗರಿಕ ವಿಮಾನಯಾನ ಕಾನೂನು ಸೇರಿದಂತೆ ಅನೇಕ ಖಾತೆಗಳನ್ನು ಮುಖ್ಯಮಂತ್ರಿಯೇ ಉಳಿಸಿಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಅವರಿಗೆ ಗ್ರಾಮೀಣಾಭಿವೃದ್ಧಿ, ರೂರಲ್ ಎಂಜಿನಿಯರಿಂಗ್, ಆಹಾರ ಸಂಸ್ಕರಣೆ ಮತ್ತು ಮನರಂಜನಾ ತೆರಿಗೆ ಖಾತೆಗಳನ್ನು ನೀಡಲಾಗಿದೆ. ಈ ಹಿಂದಿನ ಅವಧಿಯಲ್ಲಿ ಲೋಕೋಪಯೋಗಿ ಸಂಬಂಧಿತ ಎಲ್ಲ ಖಾತೆಗಳು ಮೌರ್ಯ ಬಳಿ ಇತ್ತು.
ಮತ್ತೊಬ್ಬ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಸುರೇಶ್ ಖನ್ನಾ ಅವರಿಗೆ ಸಂಸದೀಯ ವ್ಯವಹಾರ, ಹಣಕಾಸು ಖಾತೆಗಳನ್ನು ನೀಡಲಾಗಿದೆ. ಸೂರ್ಯ ಪ್ರತಾಪ್ ಸಿಂಗ್ಗೆ ಕೃಷಿ ಖಾತೆ ದೊರೆತಿದ್ದರೆ, ಸ್ವತಂತ್ರದೇವ್ ಸಿಂಗ್ಗೆ ಜಲಶಕ್ತಿ ಸಚಿವಾಲಯದ ಜವಾಬ್ದಾರಿ ದೊರೆತಿದೆ.