ಶನಿವಾರ, ಮಾರ್ಚ್ 25, 2023
28 °C
168 ಅಧಿಕಾರಿಗಳ ಹುದ್ದೆ ಬದಲು: 16 ಮಂದಿ ‘ಸ್ಥಾನ ಪಲ್ಲಟ’ ಆದೇಶ

ಕೆಪಿಎಸ್‌ಸಿ: ಮುಗಿಯದ ಗೋಳು, ಅಧಿಕಾರಿಗಳ ಅಳಲು

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ 2006ರಲ್ಲಿ ನೇಮಕಗೊಂಡಿದ್ದ 1998ನೇ ಸಾಲಿನ 383 ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು 15 ವರ್ಷಗಳ ಬಳಿಕ ಕೆಪಿಎಸ್‌ಸಿ ಜ. 30ರಂದು ಮೂರನೇ ಬಾರಿಗೆ ಪರಿಷ್ಕರಿಸಿದೆ. ಹೊಸ ಪಟ್ಟಿಯ ಪ್ರಕಾರ 168 ಅಧಿಕಾರಿಗಳ ಇಲಾಖೆ, ಹುದ್ದೆ, ವೃಂದ ಬದಲಾಗಿದ್ದು, ಅಧಿಕಾರಿಗಳ ಮರು ನೇಮಕಕ್ಕೆ ಸರ್ಕಾರ ಮುಂದಾಗಿದೆ.

ಆದರೆ, ಹುದ್ದೆ ಬದಲಾದವರ ಪೈಕಿ ಅರ್ಧಕ್ಕೂ ಹೆಚ್ಚು ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ಇಲ್ಲದವರ ಪೈಕಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ವಾಣಿಜ್ಯ ತೆರಿಗೆ ಅಧಿಕಾರಿ, ಮಾರುಕಟ್ಟೆ ಅಧಿಕಾರಿ ಮುಂತಾದ ಹುದ್ದೆಗಳಲ್ಲಿರುವ 16 ಅಧಿಕಾರಿಗಳನ್ನು ಹಾಲಿ ಹುದ್ದೆಯಿಂದ ತಕ್ಷಣದಿಂದ ಬಿಡುಗಡೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಆದೇಶ ಹೊರಡಿಸಿದೆ.

‘ಕೆಪಿಎಸ್‌ಸಿಯ ತಪ್ಪು ನಡೆಯಿಂದ ಈ ಸಾಲಿನ ಆಯ್ಕೆ ಪಟ್ಟಿ ಈಗಾಗಲೇ ಮೂರು ಬಾರಿಗೆ ಪರಿಷ್ಕರಣೆಗೊಂಡಿದೆ. ಅಲ್ಲದೆ, ಹೈಕೋರ್ಟ್‌ ನೀಡಿರುವ ತೀರ್ಪುಗಳನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ  ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ನಮ್ಮದು ಮುಗಿಯದು ಗೋಳು’ ಎಂದು ಹುದ್ದೆ ಬದಲಾಗುತ್ತಿರುವ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಾಲಿನ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಮೊದಲ ಬಾರಿಗೆ 2006ರ ಫೆ. 28ರಂದು ಪ್ರಕಟಿಸಿತ್ತು. ಬಳಿಕ, ಹೈಕೋರ್ಟ್‌ ನಿರ್ದೇಶನದಂತೆ 2019 ಜ. 25ರಂದು ಪರಿಷ್ಕರಿಸಿತ್ತು. ಅದೇ ವರ್ಷ ಆಗಸ್ಟ್‌ 28ರಂದು ಮತ್ತೊಮ್ಮೆ ಪರಿಷ್ಕರಿಸಿತ್ತು. ಆದರೆ, ಹೈಕೋರ್ಟ್‌ ನೀಡಿದ್ದ ತೀರ್ಪನ್ನು ತಪ್ಪಾಗಿ ಭಾವಿಸಿ 91 ಉತ್ತರ ಪತ್ರಿಕೆಗಳ ಬದಲು 91 ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಮಾಡಿದ ಕಾರಣ ಆಗಸ್ಟ್‌ 28ರ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ, ಕೆಪಿಎಸ್‌ಸಿ ಮೂರನೇ ಬಾರಿ ಆಯ್ಕೆ ಪಟ್ಟಿ ಪರಿಷ್ಕರಿಸಿ ಜ. 30ರಂದು ಪ್ರಕಟಿಸಿದೆ.

ಮೊದಲ ಆಯ್ಕೆ ಪಟ್ಟಿಯ ಪ್ರಕಾರ ನೇಮಕಗೊಂಡಿದ್ದ ಅಧಿಕಾರಿಗಳ ಇಲಾಖೆ, ಹುದ್ದೆ, ವೃಂದ, ಮೂರನೇ ಬಾರಿ ಪರಿಷ್ಕರಿಸಿದ್ದ (ಜ. 30ರಂದು) ಪಟ್ಟಿಯಲ್ಲಿ ಬದಲಾಗಿದೆ. ಆದರೆ, ಮೊದಲ ಎರಡು ಬಾರಿ (2019 ಜ. 25 ಮತ್ತು ಆಗಸ್ಟ್‌ 28) ಪರಿಷ್ಕರಿಸಿದ್ದ ಪಟ್ಟಿ ಪ್ರಕಾರ ಹುದ್ದೆ ಬಲಾಗಿದ್ದ 79 ಅಧಿಕಾರಿಗಳ ಪೈಕಿ 67 ಅಧಿಕಾರಿಗಳ ಹುದ್ದೆಗಳು ಮೂರನೇ ಪಟ್ಟಿಯಲ್ಲಿ ಬದಲಾವಣೆ ಆಗಿಲ್ಲ.

‘ನ್ಯಾಯಾಲಯದಿಂದ ತಡೆಯಾಜ್ಞೆ ತಂದವರನ್ನು ಬಿಟ್ಟು, ಉಳಿದಂತೆ ಹುದ್ದೆ ಬದಲಾದ ಎಲ್ಲ ಅಧಿಕಾರಿಗಳನ್ನು ಬದಲಾದ ಹುದ್ದೆಗಳಿಗೆ ನೇಮಿಸಿ ಆದೇಶ ಹೊರಡಿಸಲಾಗುತ್ತಿದೆ. ಎಂದು ಡಿಪಿಎಆರ್ ಅಧಿಕಾರಿಯೊಬ್ಬರು ತಿಳಿಸಿದರು.

ಕೆಎಟಿ ಮೆಟ್ಟಿಲೇರಿದ 43 ಅಧಿಕಾರಿಗಳು
ಜ. 30ರಂದು ಪ್ರಕಟಿಸಿರುವ ಪರಿಷ್ಕತ ಪಟ್ಟಿಯನ್ನು ಪ್ರಶ್ನಿಸಿ 43 ಅಧಿಕಾರಿಗಳು ಕೆಎಟಿ ಮೆಟ್ಟಿಲೇರಿದ್ದಾರೆ. ಈ ಅಧಿಕಾರಿಗಳ ಹುದ್ದೆಯ ವಿಷಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಕೆಎಟಿ ಆದೇಶಿಸಿದೆ. ಜ. 30ರ ಪಟ್ಟಿಯಲ್ಲಿರುವ 33 ಅಧಿಕಾರಿಗಳು ನಿಧನ, ಹುದ್ದೆಗೆ ರಾಜೀನಾಮೆ, ವರದಿ ಮಾಡಿಕೊಂಡಿಲ್ಲ ಮುಂತಾದ ಕಾರಣಗಳಿಗೆ ಸದ್ಯ ಹುದ್ದೆಯಲ್ಲಿ ಇಲ್ಲ. 15 ಅಧಿಕಾರಿಗಳು 2019ರ ಜ. 25 ಮತ್ತು ಆಗಸ್ಟ್‌ 28ರ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಎಟಿಯಲ್ಲಿ ಅರ್ಜಿ ದಾಖಲಿಸಿದ್ದಾರೆ. 8 ಪ್ರಕರಣಗಳಲ್ಲಿ ಕೆಎಟಿ ಏಕರೂಪದ ಆದೇಶ ನೀಡಿದ್ದು, ಮರುಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳುವರೆಗೆ ಈ ಅರ್ಜಿದಾರರು ಹಾಲಿ ಹುದ್ದೆಯಲ್ಲಿಯೇ ಮಂದುವರಿಸುವಂತೆ ಆದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು