ಹುಬ್ಬಳ್ಳಿ: ಕೋವಿಡ್ ನೆಪವೊಡ್ಡಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿಲ್ಲ. ಇದನ್ನು ವಿರೋಧಿಸಿ ಗಜಾನನ ಮಹಾಮಂಡಲದ ವತಿಯಿಂದ ಅ. 17ರಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಮಣ್ಣಿನ ಗಣಪತಿಯೊಂದಿಗೆ ಧರಣಿ ನಡೆಸಲಾಗುವುದು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಲ್ಗಳು, ಬಾರ್ಗಳು, ಸಾರಿಗೆ, ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಗಣಪತಿ ಪ್ರತಿಷ್ಠಾನಕ್ಕೆ ವಿರೋಧ ಎಕೆ? ಎಂದು ಪ್ರಶ್ನಿಸಿದರು.
ಕೋವಿಡ್ ಇರುವ ಕಾರಣ ನಮಗೂ ಸಮಾಜದ ಬಗ್ಗೆ ಕಾಳಜಿ ಇದೆ. ನೂರು ಷರತ್ತುಗಳನ್ನು ವಿಧಿಸಿದರೂ ನಾವು ಒಪ್ಪುತ್ತೇವೆ. ಅನುಮತಿ ಕೊಡಲೇಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿಗೆ ನೀಡಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟಿಲ್ಲ. ಇದನ್ನು ನಾವು ಒಪ್ಪುವುದಿಲ್ಲ ಎಂದರು.
ಮಹಾರಾಷ್ಟ್ರ ದಲ್ಲಿಯೂ ಕೋವಿಡ್ ಪ್ರಕರಣಗಳು ಇದ್ದರೂ ಜೂನ್ ನಲ್ಲಿಯೇ ಅನುಮತಿ ಕೊಡಲಾಗಿದೆ. ರಾಜ್ಯದಲ್ಲಿ ಯಾಕೆ ಕೊಡುತ್ತಿಲ್ಲ. ಸರ್ಕಾರ ಅನುಮತಿ ಕೊಡಲಿ; ಬಿಡಲಿ ಗಣೇಶೋತ್ಸವ ಪ್ರತಿಷ್ಠಾಪಿಸುತ್ತೇವೆ ಎಂದರು.