ಬೆಂಗಳೂರು: ಕೃಷಿ ಡಿಪ್ಲೋಮಾ, ಬಿಎಸ್ಸಿ ಮತ್ತು ತತ್ಸಮಾನ ಪದವಿ ಕೋರ್ಸ್ಗಳ ಪ್ರವೇಶಕ್ಕೆ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಪ್ರಮಾಣವನ್ನು ಶೇ 40 ರಿಂದ ಶೇ 50 ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಈ ಹಿಂದೆ ಮೀಸಲಾತಿ ಶೇ 40 ಇತ್ತು. ಆ ಪ್ರಮಾಣವನ್ನು ಶೇ 50 ರಷ್ಟು ಹೆಚ್ಚಿಸಲು ಬಜೆಟ್ನಲ್ಲಿ ಘೋಷಿಸಲಾಗಿತ್ತು ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
2021–22 ನೇ ಸಾಲಿಗೆ ಸರ್ಕಾರಿ ಶಾಲ ಮಕ್ಕಳ ಸಮವಸ್ತ್ರ ಖರೀದಿಗೆ ₹83.62 ಕೋಟಿ ನೀಡಲು ತೀರ್ಮಾನಿಸಲಾಗಿದ್ದು, ಕೈಮಗ್ಗ ನಿಗಮದಿಂದ ಖರೀದಿಸಲಾಗುವುದು. ಅಲ್ಲದೆ, ರಾಜ್ಯದ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಇತ್ಯಾದಿಗಳ ಖರೀದಿಗೆ ₹83 ಕೋಟಿ ಮಂಜೂರು ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು ಎಂದರು.
ರಾಜ್ಯದ ಹೊಸ ಜಲನೀತಿ ಕರಡು ರೂಪಿಸಿ, ಪ್ರಾಧಿಕಾರ ರಚಿಸುವ ಉದ್ದೇಶದಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಇತರ ಪ್ರಮುಖ ನಿರ್ಧಾರಗಳು:
*ಹಾಸನದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಎರಡು ಹಂತಗಳಲ್ಲಿ ₹193.65 ಕೋಟಿ ನೀಡಲು ಒಪ್ಪಿಗೆ. ರನ್ವೇ, ಟರ್ಮಿನಲ್, ತಾಂತ್ರಿಕ ಕಟ್ಟಡ ಇತ್ಯಾದಿಗಳು ಇರಲಿವೆ.
*ಕರ್ನಾಟಕ ನಾಗರಿಕ ಸೇವೆಗಳು (ನಿರ್ವಹಣಾ ವರದಿ) ತಿದ್ದುಪಡಿ ನಿಯಮ 2021. ಈ ಹಿಂದೆ ಗೋಪ್ಯ ವರದಿಯನ್ನು ಕೈ ಬರಹದ ಮೂಲಕ ನೀಡಲಾಗುತ್ತಿತ್ತು. ಇನ್ನು ಮುಂದೆ ಡಿಜಿಟಲ್ ರೂಪದಲ್ಲಿ ನೀಡಲು ಈ ತಿದ್ದುಪಡಿ ತರಲಾಗಿದೆ.
* ಬೆಳಗಾವಿ ತಾಲ್ಲೂಕು ಹಿರೇಬಾಗೇವಾಡಿಯಲ್ಲಿ ₹110 ಕೋಟಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ
* ಕರ್ನಾಟಕ ತುರ್ತುನಿಧಿ ₹500 ಕೋಟಿಯಿಂದ ₹2500 ಕೋಟಿಗೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಕೋವಿಡ್ ಕಾರಣ ಮುಂದಿನ ದಿನಗಳಲ್ಲಿ ಖರ್ಚು ಮಾಡಲು ಇಷ್ಟು ಮೊತ್ತ ಬಳಕೆ ಮಾಡಲಾಗುವುದು.
* ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೇಂದ್ರೀಯ ಗ್ರಂಥಾಲಯ ಮತ್ತು ಪರೀಕ್ಷಾ ಹಾಲ್ ನಿರ್ಮಾಣಕ್ಕೆ ₹10.27 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
*ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಗೆ ಒಳಪಡಿವ ಪಿಕೆಟಿಬಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹154.44 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
*ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ನರ್ಸಿಂಗ್ ಕೌನ್ಸಿಲ್, ನರ್ಸಿಂಗ್ ಪರೀಕ್ಷಾ ಮಂಡಳಿ ಮತ್ತು ಅರೆ ವೈದ್ಯಕೀಯ ಮಂಡಳಿಗಳ ಕಚೇರಿ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ₹75 ಕೋಟಿ ಆಡಳಿತಾತ್ಮಕ ಅನುಮೋದನೆ
* ಹಾಸನದಲ್ಲಿ ₹196.35 ಕೋಟಿ ವೆಚ್ಚದಲ್ಲಿ ಗ್ರೀನ್ಫೀಲ್ಡ್ ದೇಶಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಿಸಲು ಒಪ್ಪಿಗೆ
*ಉತ್ತರ ಕನ್ನಡ ಜಿಲ್ಲೆಯ ರಾಮನಗುಳಿ ಮತ್ತು ಡೋಗ್ರಿ ಗ್ರಾಮವನ್ನು ಸಂಪರ್ಕಿಸುವ ಗಂಗಾವಳಿ ನದಿಗೆ ₹25 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ
*ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕು ಗಂಡಸಿ ಮತ್ತು ಬಾಣಾವರದ 530 ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು₹ 307.17 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಒಪ್ಪಿಗೆ
* ಮೈಸೂರಿನಲ್ಲಿ ಮುಡಾ ಅಭಿವೃದ್ಧಿಪಡಿಸಿರುವ ಬಡಾವಣೆಗಳನ್ನು ಸಂಬಂಧಿಸಿ ಸ್ಥಳೀಯ ಆಡಳಿತಗಳಿಗೆ ಒಪ್ಪಿಸುವುದಕ್ಕೆ ಮುನ್ನ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ₹377.60 ಕೋಟಿ ಆಡಳಿತಾತ್ಮಕ ಅನುಮೋದನೆ
* ಭೂ ಅನುಮೋದನೆ 22 ಎ ಅಡಿ ಇನ್ನು ಮುಂದೆ ಖರಾಬು ಜಮೀನುಗಳಲ್ಲಿ ಕೆರೆ, ತೊರೆ, ಹಳ್ಳಗಳ ಸ್ವರೂಪ ನಾಶವಾಗಿ 10 ವರ್ಷಗಳು ಕಳೆದಿದ್ದರೆ, ಇತರ ಬಳಕೆಗೆ ಅವಕಾಶ ನೀಡಬಹುದು. ಇದಕ್ಕೆ ಸರ್ವೇ ವರದಿ ಅಗತ್ಯವಿದೆ. ಈ ಹಿಂದೆ ನಿರ್ಬಂಧವಿರಲಿಲ್ಲ.
* ಅಣೆಕಟ್ಟು ಸುವ್ಯವಸ್ಥೆಗೊಳಿಸುವ (ಡಿಆರ್ಪಿಐ) ಹಂತ 2 ಮತ್ತು 3 ರ ಅಡಿ 58 ಅಣೆಕಟ್ಟುಗಳ ನಿರ್ವಹಣೆಗೆ ವಿಶ್ವಬ್ಯಾಂಕ್ ನೆರವಿನಡಿ ಯೋಜನೆ ಕೈಗೆತ್ತಿಕೊಳ್ಳುವ ₹1500 ಕೋಟಿ ಯೋಜನೆಗೆ ಒಪ್ಪಿಗೆ ಈ ಯೋಜನೆಗೆ ವಿಶ್ವಬ್ಯಾಂಕ್ ಶೇ 70 ಮತ್ತು ರಾಜ್ಯ ಸರ್ಕಾರ ಶೇ 30 ರಷ್ಟು ವೆಚ್ಚ ಭರಿಸಲಿವೆ.
* ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಗೋವಿನಕೋವಿ, ಹನುಸಾಗರದ 94 ಕೆರೆಗಳನ್ನು ತುಂಬಿಸುವ ₹415 ಕೋಟಿ ಅಂದಾಜಿಗೆ ಒಪ್ಪಿಗೆ. ತುಂಗಭದ್ರಾ ನದಿಯಿಂದ ನೀರೆತ್ತಲಾಗುವುದು
*ಬಳ್ಳಾರಿ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 74 ಕೆರೆಗಳನ್ನು ತುಂಬಿಸುವ ₹670 ಕೋಟಿ ಯೋಜನೆಗೆ ಒಪ್ಪಿಗೆ. ತುಂಗಭದ್ರಾ ನದಿಯಿಂದ ನೀರೆತ್ತಲಾಗುವುದು
*ದಾವಣಗೆರೆ ಜಿಲ್ಲೆಯ ಸಾಸ್ವೆ ಹಳ್ಳಿ ಏತ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳ ಸಂವರ್ಧನೆಗೆ ₹167 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.