ಬೆಂಗಳೂರು: ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿರುವ ಧಾಟಿ ಯನ್ನೇ ನಾಡಗೀತೆಗೆ ಅಳವಡಿಸಿಕೊಳ್ಳಲು ತಜ್ಞರ ಸಮಿತಿ ಶಿಫಾರಸ್ಸು ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನೇ ಅಧಿಕೃತ ಎಂದು ಶನಿವಾರ ಪ್ರಕಟಿಸುವ ಸಾಧ್ಯತೆ ಇದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದಕ್ಕೆ ಸಂಬಂಧಿಸಿದ ಕಡತವನ್ನು ಬೊಮ್ಮಾಯಿ ಅವರಿಗೆ ಕಳುಹಿಸಿದೆ. ಈ ಕಡತಕ್ಕೆ ಸಹಿ ಆದ ತಕ್ಷಣವೇ ಮುಖ್ಯಮಂತ್ರಿಯವರೇ ಅಧಿಕೃತವಾಗಿ ಪ್ರಕಟಿಸ ಲಿದ್ದಾರೆ. ನಾಡಗೀತೆಯ ಅವಧಿ 2 ನಿಮಿಷ 14 ಸೆಕೆಂಡುಗಳಷ್ಟು ಇರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರ ರಚಿಸಿದ್ದ ಸಮಿತಿಯಲ್ಲಿ ಕವಿ ದೊಡ್ಡರಂಗೇಗೌಡ, ಎಚ್.ಆರ್.ಲೀಲಾವತಿ, ಕಸ್ತೂರಿ ಶಂಕರ್ ಸೇರಿ ಒಟ್ಟು 18 ಮಂದಿ ಇದ್ದರು. ಸಮಿತಿಯು ಒಮ್ಮತದಿಂದಲೇ ಅನಂತಸ್ವಾಮಿ ಧಾಟಿಯ ನಾಡಗೀತೆ ಅಳವಡಿಸಿಕೊ ಳ್ಳಲು ಒಪ್ಪಿಗೆ ನೀಡಿದೆ.