ಹರಿಹರ: ಎಲ್ಲಾ ಸಮಾಜಗಳನ್ನು ಒಂದೇ ರೀತಿ ಸಮಾನಾಗಿ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂಬ ನಿಮ್ಮ ಒಕ್ಕೊರೊಳ ಮನವಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಜಯಪ್ರಕಾಶ್ ಹೆಗ್ಡೆಆಯೋಗದ ಸಮೀಕ್ಷೆಯ ವರದಿ ಬಂದ ಬಳಿಕ ಈ ಕಾರ್ಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು.
ನಾವು ನೇಮಿಸಿದ ಹಿಂದುಳಿದ ವರ್ಗದ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ನೀಡುವ ಕೆಲಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಆಯೋಗವು ಪ್ರತಿ ಜಿಲ್ಲೆಗಳಿಗೆ ಹೋಗಿ ಸಮೀಕ್ಷೆ ನಡೆಸುತ್ತಿದೆ. ಆಯೋಗದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಾಜ ಶಕ್ತಿಯುತವಾಗಿ ಆಗಬೇಕಿದ್ದರೆ ಒಂದೇ ಧ್ವನಿ ಇರಬೇಕು ಇರಬೇಕು. ಭಕ್ತರು ಒಟ್ಟಿಗೆ ಇರಬೇಕು. ಪ್ರತ್ಯೇಕ ಧ್ವನಿಗಳು ಇರಬಾರದು ಎಂದು ಹೇಳಿದರು.
ಈ ನಾಡಿನ ನೆಲ, ಜಲ, ಭಾಷೆ, ಗಡಿಗಳ ವಿಚಾರ ಬಂದಾಗ ನಾವು ರಾಜಕೀಯವನ್ನು ಮರೆತು ಎಲ್ಲಾ ಪಕ್ಷಗಳು ಒಂದಾಗುತ್ತೇವೆ. ಅದೇ ರೀತಿ ನೀವು ಕೂಡ ಒಂದಾಗಬೇಕು ಎಂದು ಸಲಹೆ ನೀಡಿದರು.