ಚಿತ್ರದುರ್ಗ: ಚಿತ್ರದುರ್ಗ-ದಾವಣಗೆರೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಸೋಮಶೇಖರ ವಿರುದ್ಧ 358 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.
ಬಿಜೆಪಿಯ ನವೀನ್ 2,629, ಕಾಂಗ್ರೆಸ್ ನ ಬಿ.ಸೋಮಶೇಖರ 2,271, ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ 16 ಮತಗಳನ್ನು ಗಳಿಸಿದ್ದಾರೆ. 144 ಮತಗಳು ತಿರಸ್ಕೃತಗೊಂಡಿವೆ. 5,060 ಮತಗಳು ಚಲಾವಣೆ ಆಗಿದ್ದವು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರೆ ಮಾತನಾಡಿ, ಚಲಾವಣೆ ಅಗಿರುವ ಮತಗಳ ಪೈಕಿ ಗೆಲುವು ಸಾಧಿಸುವ ವ್ಯಕ್ತಿ 2,459 ಮತಗಳನ್ನು ಪಡೆಯಬೇಕಿತ್ತು. ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ನವೀನ್ ಅವರು 2,629 ಮತಗಳನ್ನು ಪಡೆದಿದ್ದ ಪರಿಣಾಮ ಗೆಲುವು ಸಾಧಿಸಿದರು. ಚುನಾವಣೆ ಆಯೋಗ ಅಧಿಕೃತ ಘೋಷಣೆ ಮಾಡಲಿದೆ' ಎಂದು ಹೇಳಿದರು.
'ಇದು ಹಣಬಲ ಮತ್ತು ಜನಬಲದ ನಡುವೆ ನಡೆದ ಚುನಾವಣೆ. ಕ್ಷೇತ್ರದ ಹೊರಗಿನ ಅಭ್ಯರ್ಥಿ ಬದಲು ಮನೆ ಮಗನಿಗೆ ಮತದಾರರು ಮಣೆ ಹಾಕಿದ್ದಾರೆ. ಇದೊಂದು ಹೋರಾಟದ ಚುನಾವಣೆ ಅಗಿತ್ತು. ಎರಡು ಜಿಲ್ಲೆಯ ಶಾಸಕರು ಮತ್ತು ಸಂಸದರು ಸಹಕಾರ ನೀಡಿದರು. ಹೀಗಾಗಿ, ಗೆಲುವು ಸುಲಭವಾಯಿತು' ಎಂದು ಕೆ.ಎಸ್.ನವೀನ್ ಹರ್ಷ ವ್ಯಕ್ತಪಡಿಸಿದರು.