ಶಿವಮೊಗ್ಗ: ‘ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ಕಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅದು ಸ್ವಯಂ ನಿರ್ಧಾರ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಸೇರಿ ಪಕ್ಷದ ಯಾವ ಮುಖಂಡರೂ ಕಡೆಗಣಿಸಿಲ್ಲ. ಯಾರ ಒತ್ತಡವೂ ನನ್ನ ಮೇಲಿಲ್ಲ. ಬಿಜೆಪಿ ಆಂತರಿಕ ವಿಚಾರ, ಪ್ರಧಾನಿ, ಆರ್ಎಸ್ಎಸ್ ಕುರಿತು ಹೇಳಿಕೆ ನೀಡುವ ಮೊದಲು ಸಿದ್ದರಾಮಯ್ಯ ನಾಲಿಗೆ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಲಿ. ಇಲ್ಲದಿದ್ದರೆ ಜನರು ತಕ್ಕಪಾಠ ಕಲಿಸುವರು’ ಎಂದು ಎಚ್ಚರಿಸಿದರು.
‘ಸಿಂದಗಿ, ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವರು. ಅ.20, 21ರಂದು ಸಿಂದಗಿ, 22, 23ರಂದು ಹಾನಗಲ್ನಲ್ಲಿ ಪ್ರಚಾರ ನಡೆಸುವೆ. ಅಗತ್ಯವಿದ್ದರೆ ಹಾನಗಲ್ನಲ್ಲಿ ಹೆಚ್ಚುವರಿಯಾಗಿ ಒಂದು ದಿನ ಪ್ರಚಾರ ಕೈಗೊಳ್ಳುವೆ’ ಎಂದು ವಿವರ ನೀಡಿದರು.
‘ಕೇಂದ್ರ, ರಾಜ್ಯ ಸರ್ಕಾರಗಳು ಯಾರಿಗೂ ಅನ್ಯಾಯ ಮಾಡಿಲ್ಲ. ಅಲ್ಪ ಸಂಖ್ಯಾತರಿಗೆ ವಂಚನೆ ಮಾಡಿದ ಒಂದಾದರೂ ಉದಾಹರಣೆಯನ್ನು ಸಿದ್ದರಾಮಯ್ಯ ಕೊಡಲಿ. ಪ್ರಾಮಾಣಿಕ ಕೆಲಸ ಮಾಡಲಾಗಿದೆ. ಅಲ್ಪಸಂಖ್ಯಾತರು ಬೇಸರ ಮಾಡಿಕೊಳ್ಳುವ ಅಗತ್ಯವೇ ಇಲ್ಲ’ ಎಂದರು.