ಹುಬ್ಬಳ್ಳಿ: ‘ನನೆಗುದಿಗೆ ಬಿದ್ದಿದ್ದ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಕಾಮಗಾರಿ ಇದೇ ವರ್ಷ ಆರಂಭವಾಗುವ ಎಲ್ಲ ಸಾಧ್ಯತೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಘಂಟಿಕೇರಿಯ ಸರ್ಕಾರಿ ಶಾಸಕರ ಮಾದರಿ ಶಾಲೆ ನಂ. 5ರಲ್ಲಿ ಭಾನುವಾರ ಸ್ಮಾರ್ಟ್ ಸಿಟಿ ಯೋಜನೆಯಡಿ ಮುಕ್ತಾಯಗೊಂಡ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ವಾಣಿಜ್ಯ ನಗರಿ ಹುಬ್ಬಳ್ಳಿ ಅಭಿವೃದ್ಧಿಗೆ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಯೋಜನೆ ಜಾರಿ ಅಗತ್ಯ. ಅದರಿಂದ ಬೆಲೆಕೇರಿ ಬಂದರು ಸಹ ಅಭಿವೃದ್ಧಿಯಾಗಲಿದೆ. ಯೋಜನೆಗಿದ್ದ ತೊಡಕುಗಳು ನಿವಾರಣೆಯಾಗುವ ಸಾಧ್ಯತೆಯಿದ್ದು, ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ದೊರೆಯುವ ಅಂತಿಮ ಹಂತಕ್ಕೆ ಬಂದಿದೆ’ ಎಂದರು.
‘ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆ ಎರಡು ವರ್ಷದ ಹಿಂದೆಯೇ ಮುಗಿಯಬೇಕಿತ್ತು. ವಿಳಂಬವಾಗಿದೆ. ಏನೇ ಸಮಸ್ಯೆಗಳಿದ್ದರೂ ತಕ್ಷಣ ಪರಿಹಾರ ಕಂಡುಕೊಂಡು, ಮಾರ್ಚ್ 31ರ ಒಳಗೆ ಎಲ್ಲ ಕಾಮಗಾರಿ ಮುಗಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.