ಬೆಂಗಳೂರು: ಒಬ್ಬರ ನಿವೇಶನವನ್ನು ಬೇರೊಬ್ಬರು ಅಕ್ರಮವಾಗಿ ಖರೀದಿಸಿ ಕಟ್ಟಡ ನಿರ್ಮಿಸುತ್ತಿರುವುದನ್ನು ತಡೆಯಲು ₹ 15 ಸಾವಿರ ಲಂಚ ಪಡೆಯುತ್ತಿದ್ದ ಬಿಬಿಎಂಪಿಯ ಗಾಂಧಿನಗರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಸಹಾಯಕ ಎಂಜಿನಿಯರ್ ಪೂಜಾರಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಬಂಧಿಸಿದೆ.
ದೂರು ನೀಡಿದ ವ್ಯಕ್ತಿಗೆ ಸೇರಿದ ನಿವೇಶನವನ್ನು ಅವರ ಚಿಕ್ಕಮ್ಮನ ಮೂಲಕ ವ್ಯಕ್ತಿಯೊಬ್ಬರು ಖರೀದಿಸಿದ್ದರು. ಅಕ್ರಮವಾಗಿ ತಮ್ಮ ನಿವೇಶನ ಖರೀದಿಸಿ ಕಟ್ಟಡ ನಿರ್ಮಿಸುತ್ತಿದ್ದು, ಕೆಎಂಸಿ ಕಾಯ್ದೆಯಡಿ ಕ್ರಮ ಜರುಗಿಸಬೇಕು ಎಂದು ಕೋರಿ ನಿವೇಶನದ ಮಾಲೀಕರು ಬಿಬಿಎಂಪಿ ಗಾಂಧಿನಗರ ಉಪ ವಿಭಾಗದ ಕಚೇರಿಗೆ ದೂರು ನೀಡಿದ್ದರು.
ಕ್ರಮ ಜರುಗಿಸಲು ₹ 50 ಸಾವಿರ ಲಂಚ ನೀಡುವಂತೆ ಪೂಜಾರಪ್ಪ ಬೇಡಿಕೆ ಇಟ್ಟಿದ್ದರು. ₹ 15 ಸಾವಿರ ಮುಂಗಡ ನೀಡುವುದಾಗಿ ತಿಳಿಸಿದ್ದ ನಿವೇಶನದ ಮಾಲೀಕ, ಈ ಕುರಿತು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು. ಸೋಮವಾರ ಲಂಚದ ಹಣ ಪಡೆಯುತ್ತಿದ್ದ ಪೂಜಾರಪ್ಪ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.