ಶಿರಾ: ‘ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಕ್ಷೇತ್ರವನ್ನು ಗೆಲ್ಲುವುದು ಬಿಜೆಪಿಗೆ ಸಾಧ್ಯವಿಲ್ಲ. ಶಿರಾದಲ್ಲಿ ಬಿಜೆಪಿ ಆಟ ನಡೆಯಲ್ಲ’ ಎಂದುಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
‘ಕೆ.ಆರ್. ಪೇಟೆ ಮಾದರಿಯಲ್ಲಿ ಶಿರಾ ಕ್ಷೇತ್ರವನ್ನು ಗೆಲ್ಲುವುದಾಗಿ ಬಿಜೆಪಿಯ ಯುವನಾಯಕ ಹೇಳುತ್ತಿದ್ದಾರೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಚುನಾವಣೆ ಮುಗಿಯುವವರೆಗೂ ಶಿರಾ ಕ್ಷೇತ್ರದಲ್ಲಿದ್ದು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.
ತಾಲ್ಲೂಕಿನ ಚಂಗಾವರ ಗ್ರಾಮದಲ್ಲಿ ಬುಧವಾರ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದ ಅವರು, ಬಿಜೆಪಿ ಯುವ ನಾಯಕ ಬಿ.ವೈ.ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸದೆ ತರಾಟೆಗೆ ತೆಗೆದುಕೊಂಡರು.
‘ಕೆ.ಆರ್.ಪೇಟೆಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು, ಅಕ್ರಮವಾಗಿ ಹಣ ಹಂಚಿ ಬಿಜೆಪಿ ಗೆದ್ದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಲ್ಲಿರುವ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ನಂಬಿದ್ದೇನೆ’ ಎಂದು ಗೌಡರು ವಿಶ್ವಾಸ ವ್ಯಕ್ತಪಡಿಸಿದರು.
***
ಯಡಿಯೂರಪ್ಪ ಅವರ ಪುತ್ರ ವ್ಯಾಮೋಹದಿಂದ ಆಡಳಿತ ದಿಕ್ಕು ತಪ್ಪಿದೆ. ಉಪ ಚುನಾವಣೆಗಳ ಫಲಿತಾಂಶ ರಾಜ್ಯ ರಾಜಕೀಯದ ದಿಕ್ಸೂಚಿಯಲ್ಲ. ಆದರೆ, ಭ್ರಷ್ಟ ಸರ್ಕಾರದ ವಿರುದ್ಧದ ಜನಾದೇಶವಾಗಲಿದೆ. ಪಕ್ಷದ ಆಂತರಿಕ ವರದಿ ಪ್ರಕಾರ ಶೇ 44ರಷ್ಟು ಮತ ಪಡೆದು ಟಿ.ಬಿ. ಜಯಚಂದ್ರ ಗೆಲ್ಲಲಿದ್ದಾರೆ.