ಬೆಂಗಳೂರು: ‘ಕೇಂದ್ರ ಸರ್ಕಾರದ ಆದೇಶದಂತೆ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್ಟಿ) ಜಾತಿ ಪ್ರಮಾಣಪತ್ರ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ತಳವಾರ ಸಮಾಜದ ಅಧ್ಯಕ್ಷ ಶಾಣಪ್ಪ ಪೀರಪ್ಪ ಕಣಮೇಶ್ವರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರನ್ನು ಬುಧವಾರ ಭೇಟಿ ಮಾಡಿತು.
ಸಿಂದಗಿ ಚುನಾವಣಾ ಪ್ರಚಾರಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ತೆರಳಿದ್ದ ಸಂದರ್ಭದಲ್ಲಿ ಭೇಟಿ ಮಾಡಿದ್ದ ಸಮುದಾಯದ ಮುಖಂಡರು, ಕೇಂದ್ರ ಸರ್ಕಾರದ ಆದೇಶದಂತೆ ಎಸ್.ಟಿ ಪ್ರಮಾಣಪತ್ರ ನೀಡಲು ಒತ್ತಾಯಿಸಿದ್ದರು. ಸೂಕ್ತ ದಾಖಲಾತಿಯೊಂದಿಗೆ ಬೆಂಗಳೂರಿಗೆ ಬಂದು ಭೇಟಿ ಮಾಡುವಂತೆ ಮುಖ್ಯಮಂತ್ರಿ ತಿಳಿಸಿದ್ದರು.
ಮುಖ್ಯಮಂತ್ರಿ ಭೇಟಿಯ ಬಳಿಕ ಮಾತನಾಡಿದ ಶಾಣಪ್ಪ ಪೀರಪ್ಪ ಕಣಮೇಶ್ವರ್, ‘ನಮ್ಮ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರದ ಗೆಜೆಟ್ನಲ್ಲಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದರು.
‘ಮುಖ್ಯಮಂತ್ರಿ ತಿಳಿಸಿದಂತೆ ದಾಖಲಾತಿಗಳ ಜೊತೆ ಭೇಟಿ ಮಾಡಿದ್ದೇವೆ. ಎಸ್.ಟಿ ಪ್ರಮಾಣಪತ್ರ ನೀಡುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಪ ಚುನಾವಣೆಯಲ್ಲಿ ತಳವಾರ ಸಮುದಾಯ ಬಿಜೆಪಿಗೆ ಬೆಂಬಲ ನೀಡಲಿದೆ’ ಎಂದರು.
ಸಮುದಾಯದ ಯುವ ಮುಖಂಡ ಅಮರೇಶ್ ಕಾಮನಕೆರೆ ಮಾತನಾಡಿ, ‘ನಮ್ಮ ಬಹುದಿನಗಳ ಬೇಡಿಕೆ ಈಡೇರಿಸುವವರ ಪರ ನಾವು ನಿಲ್ಲಲ್ಲಿದ್ದೇವೆ. ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮುಂಬೈ– ಕಲ್ಯಾಣ ಕರ್ನಾಟಕದಲ್ಲಿರುವ ಸಮುದಾಯದ 22 ಲಕ್ಷಕ್ಕೂ ಹೆಚ್ಚು ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
ನಿಯೋಗದಲ್ಲಿ ತಮ್ಮಣ್ಣ ಸುಣಗಾರ, ಷಣ್ಮಖಪ್ಪ ಸೋಮನಾಯಕ, ಈರಣ್ಣ ಕುರಿ, ಯಲ್ಲುಬಾಳುಡಗಿ, ಶ್ರೀ ಶೈಲಗುಯ್ಯಾರ, ಶಿವಾಜಿ ಮಟಗರ, ಬಸವರಾಜ ತಾವರಖೇಡಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.