ಬೆಳಗಾವಿ (ಸುವರ್ಣ ವಿಧಾನಸೌಧ): ‘ಮತಾಂತರ ನಿಷೇಧ ಕಾಯ್ದೆ ತರಲು ಬಿಜೆಪಿಯವರು ಹೊರಟಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದಕ್ಕೆ ನಾವು ಆಸ್ಪದ ಕೊಡಲ್ಲ. ಬಿಜೆಪಿಯವರ ಮಕ್ಕಳೇ ಲವ್ ಜಿಹಾದ್ನಲ್ಲಿದ್ದಾರೆ. ಅದಕ್ಕೆ ಅವರು ಮೊದಲು ಉತ್ತರ ಕೊಡಲಿ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಡಿಸಿದರು.
‘ಮಹಾರಾಷ್ಟ್ರದ ಮಾಜಿ ಗೃಹ ಸಚಿವರು ಬೆಳಗಾವಿಯಲ್ಲೇ ಎರಡು ದಿನ ಉಳಿದಿದ್ದರು. ಆದರೆ, ಇಲ್ಲಿನ ಗೃಹ ಸಚಿವರಿಗೆ ಈ ಮಾಹಿತಿಯೇ ಇಲ್ಲ. ಮಾಹಿತಿಯೇ ಇಲ್ಲವೆಂದರೆ ಹೇಗೆ? ಇದರ ಹಿಂದೆ ರಾಜಕಾರಣಿಗಳ ಷಡ್ಯಂತ್ರವಿದೆ. ಈ ಘಟನೆಯ ಸಮಗ್ರ ತನಿಖೆ ಆಗಬೇಕು’ ಎಂದೂ ಒತ್ತಾಯಿಸಿದರು.
ಎಂಇಎಸ್ ನಿಷೇಧಿಸಿ: ‘ಎಂಇಎಸ್ ಸಂಘಟನೆಯನ್ನು ನಿಷೇಧಿಸಲೆಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಇಂಥ ವಿಚಾರಗಳಲ್ಲಿ ಪೊಲೀಸರನ್ನು ಮುಕ್ತವಾಗಿ ಕೆಲಸ ಮಾಡಲು ಬಿಡಬೇಕು. ಯಾವುದೇ ಕಾರಣಕ್ಕೂ ತಪ್ಪು ಮಾಡಿದವರನ್ನು ಸುಮ್ಮನೆ ಬಿಡಬಾರದು. ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಬೇಕು‘ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಆಗ್ರಹಿಸಿದರು.
‘ಮತಾಂತರ ನಿಷೇಧ ಕಾನೂನಿಗೆ ನಮ್ಮ ವಿರೋಧ ಇದೆ. ಪರಿಷತನಲ್ಲಿ ಮಸೂದೆ ಮಂಡಿಸಿದರೆ ವಿರೋಧಿಸುತ್ತೇವೆ. ಬಿಜೆಪಿಯವರು ದಾರಿ ತಪ್ಪಿದ ಮಕ್ಕಳು. ಅವರಿಗೆ ಏನನ್ನೂ ಹೇಳಲಾಗದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಗಿದ್ದರೂ ಹೋಗುತ್ತಿದ್ದಾರೆ. ಅವರು ಹೋಗುವ ಮುನ್ನ ಒಳ್ಳೆಯ ಕೆಲಸ ಮಾಡಿ ಹೋಗಲಿ’ ಎಂದು ಸಲಹೆ ನೀಡಿದರು.
‘ಮತಾಂತರ ತಡೆ ಮಸೂದೆ ತರುವ ಮುನ್ನ ವಿದೇಶಿ ಕನ್ನಡಿಗರ ಬಗ್ಗೆಯೂ ಸರ್ಕಾರ ಯೋಚಿಸಲಿ. ಇಲ್ಲಿ ಆ ಕಾಯ್ದೆ ತಂದರೆ ವಿದೇಶಗಳಲ್ಲಿ ಕನ್ನಡಿಗರು ನೆಮ್ಮದಿಯಾಗಿ ಇರಲು ಸಾಧ್ಯವೇ? ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ಈ ಕಾನೂನು ತರುತ್ತಿದ್ದಾರೆ. ಬಿಜೆಪಿಯವರು ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದಿಸುತ್ತಾರೆ. ಅವರ ವಿರುದ್ಧವೇ ಕಾನೂನು ತರುವುದು ಸರೀನಾ? ಮತಾಂತರ ನಿಷೇಧ ಜತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ ಎಂದು ಕಾನೂನು ತರಲಿ’ ಎಂದು ಆಗ್ರಹಿಸಿದರು.
ಇತ್ತೀಚೆಗೆ ಸಿ.ಎಂ. ಇಬ್ರಾಹಿಂ ಸಕ್ರಿಯರಾಗಿದ್ದಾರೆಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ಕಾಲ ಈಗ ಸಂಪೂರ್ಣ ಬದಲಾಗಿದೆ. ಹೀಗಾಗಿ ನಾನು ತುಂಬಾ ಸಕ್ರಿಯವಾಗಿದ್ದೇನೆ. ಕಾಲಾಯಾ ತಸ್ಮೈ ನಮಃ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.