ಬೆಂಗಳೂರು: ‘ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗದ ರಾಜ್ಯ ಬಿಜೆಪಿ ಸರ್ಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ವಿಫಲ ಪ್ರಯತ್ನದಲ್ಲಿ ತೊಡಗಿದೆ’ ಎಂದು ವಿಧಾನಸಬೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ‘ಕೊರೊನಾದಿಂದ ರಕ್ಷಿಸಿಕೊಳ್ಳಲು ಜನತೆಗೆ ನಿಯಮ, ನಿರ್ಬಂಧ, ಮಾರ್ಗಸೂಚಿಗಳ ಉಪದೇಶ ಮಾಡುವುದರ ಜೊತೆಗೆ, ಕೊರೊನಾ ಎದುರಿಸಲು ರಾಜ್ಯ ಸರ್ಕಾರ ಏನು ಮಾಡಿದೆ ಎನ್ನುವುದನ್ನು ಜನತೆಗೆ ತಿಳಿಸಲು ತಕ್ಷಣ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ತೆರುವ ಶಕ್ತಿ ಜನರಿಗೆ ಇಲ್ಲ. ಆಮ್ಲಜನಕದ ದಾಸ್ತಾನಿಲ್ಲ, ರೆಮ್ಡಿಸಿವಿರ್ ನಂಥ ಜೀವರಕ್ಷಕ ಔಷಧಿಯ ಕೊರತೆ ಇದೆ. ಮುಖ್ಯಮಂತ್ರಿ ಆಸ್ಪತ್ರೆಯಲ್ಲಿದ್ದಾರೆ’
‘ವರ್ಷದ ಹಿಂದೆ ಮೊದಲ ಬಾರಿ ಕೊರೊನಾ ದಾಳಿ ಇಟ್ಟಾಗ ಅದು ಅನಿರೀಕ್ಷಿತ ಆಘಾತ. ಒಂದು ವರ್ಷದ ಅನುಭವದಿಂದ ರಾಜ್ಯ ಸರ್ಕಾರ ಕೊರೊನಾ ಎದುರಿಸಲು ತನ್ನನ್ನು ಇನ್ನಷ್ಟು ಸಜ್ಜುಗೊಳಿಸಬೇಕಾಗಿತ್ತು. ಕೊರೊನಾವನ್ನೂ ತನ್ನ ಭ್ರಷ್ಟತೆಗೆ ಬಳಸಿಕೊಂಡ ರಾಜ್ಯ ಸರ್ಕಾರ, ಸರ್ಕಾರ ಈಗ ಕೈಚೆಲ್ಲಿ ಕೂತಿದೆ’ ಎಂದೂ ದೂರಿದ್ದಾರೆ.
‘ಸರ್ಕಾರದ ಮಾರ್ಗಸೂಚಿಗಳನ್ನು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಮುಖ್ಯಮಂತ್ರಿಗೆ ಸಚಿವರ ಮೇಲಾಗಲಿ, ಶಾಸಕರ ಮೇಲಾಗಲಿ ನಿಯಂತ್ರಣವೇ ಇಲ್ಲದೆ ನಿರ್ಮಾಣಗೊಂಡಿರುವ ಅರಾಜಕತೆಯೇ ಇಂದಿನ ದುಸ್ಥಿತಿಗೆ ಕಾರಣ’ ಎಂದೂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.