ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಮಾಜಿ ಶಾಸಕ ಶ್ರೀಶೈಲ ಬಿದರೂರು ನಿಧನದ ಕಾರಣದಿಂದ ಭಾನುವಾರಕ್ಕೆ ಮುಂದೂಡಲಾಗಿದೆ.
ನಗರದ ವರ್ತೂರಿನ ರೆಸಾರ್ಟ್ ಒಂದರಲ್ಲಿ ಶುಕ್ರವಾರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ರೋಣ, ಗದಗ ಕ್ಷೇತ್ರಗಳ ಮಾಜಿ ಶಾಸಕ ಶ್ರೀಶೈಲ ಬಿದರೂರು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಭೆ ಆರಂಭದ ಸಮಯದಲ್ಲೇ ಮಾಜಿ ಶಾಸಕರ ನಿಧನದ ಸುದ್ದಿಯೂ ಬಂತು. ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಿ, ಸಭೆಯನ್ನು ಮುಂದೂಡಲಾಯಿತು.
ಈ ಕುರಿತು ಪತ್ರಕರ್ತರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 'ನಮ್ಮ ಪಕ್ಷದ ನಾಯಕರಾದ ಶ್ರೀಶೈಲ ಬಿದರೂರು ಅವರ ನಿಧನದ ಕಾರಣದಿಂದ ಸಭೆಯನ್ನು ಮುಂದೂಡಲಾಗಿದೆ. ಭಾನುವಾರ ಝೂಮ್ ಆ್ಯಪ್ ಮೂಲಕ ವರ್ಚ್ಯುಯಲ್ ಆಗಿ ಸಭೆ ನಡೆಸಲಾಗುವುದು' ಎಂದು ತಿಳಿಸಿದರು.