ಬೆಂಗಳೂರು: 'ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ವರದಿ ಕುರಿತಂತೆ ತಜ್ಞರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ, ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ತಜ್ಞರ ವರದಿ ಇನ್ನೂ ಅಧಿಕಾರಿಗಳ ಮಟ್ಟದಲ್ಲಿದೆ. ಆ ವರದಿ ಮತ್ತು ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಲಾಗುವುದು. ಸಭೆಯ ತೀರ್ಮಾನಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವ ಸಹೋದ್ಯೋಗಿಗಳ ಜತೆ ಸಮಾಲೋಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು’ ಎಂದರು.
‘ಕೋವಿಡ್ನ ಎರಡನೇ ಅಲೆ ಪರಿಣಾಮಕಾರಿಯಾಗಿರುತ್ತದೆ ಎಂದು ವೈಯಕ್ತಿಕವಾಗಿ ನನಗೆ ಅನ್ನಿಸುತ್ತಿಲ್ಲ. ಆದರೂ, ತಜ್ಞರು ನಡೆಸಿರುವ ಅಧ್ಯಯನ ವರದಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಎಚ್ಚರಿಕೆಯ ಹೆಜ್ಜೆ ಇಡಲಾಗುವುದು’ ಎಂದರು.
‘ಕೋವಿಡ್ ಲಸಿಕೆ ವಿತರಣೆ ಮತ್ತು ದಾಸ್ತಾನು ಸಂಬಂಧ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವ ವ್ಯಾಕ್ಸಿನ್, ಎಷ್ಟು ಪ್ರಮಾಣದಲ್ಲಿ ನೀಡಬೇಕು, ಯಾರಿಗೆ ನೀಡಬೇಕು ಎಂಬ ವಿಷಯಗಳು ಇತ್ಯರ್ಥಗೊಂಡ ತಕ್ಷಣ ವ್ಯಾಕ್ಸಿನ್ ವಿತರಣೆ ವ್ಯವಸ್ಥಿತವಾಗಿ ನಡೆಯಲಿದೆ’ ಎಂದರು.
ವಾರದೊಳಗೆ ವೇತನ: ‘ಕಡ್ಡಾಯ ಸೇವೆಗಾಗಿ ನೇಮಕಗೊಂಡಿರುವ ರೆಸಿಡೆಂಟ್ ಡಾಕ್ಟರ್ಗಳಿಗೆ ತಾಂತ್ರಿಕ ಕಾರಣಗಳಿಂದ ವೇತನ ಬಿಡುಗಡೆ ವಿಳಂಬವಾಗಿದೆ. ವಾರದೊಳಗಾಗಿ ವೇತನ ಬಿಡುಗಡೆಯಾಗಲಿದೆ. ಅಲ್ಲಿಯವರೆಗೆ ಆಯಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ವೇತನ ನೀಡಲು ಸೂಚಿಸಲಾಗಿದೆ’ ಎಂದರು.
ವಿಶ್ವನಾಥ್ ಒಂಟಿಯಲ್ಲ: ‘ವಿಶ್ವನಾಥ್ ಅವರು ಒಂಟಿಯಲ್ಲ. ಮುಖ್ಯಮಂತ್ರಿ ಸಹಿತ ನಾವು 17 ಮಂದಿಯೂ ಅವರ ಜೊತೆಗಿದ್ದೇವೆ. ನಾವೆಲ್ಲರೂ ಈಗ ಬಿಜೆಪಿ ಕಾರ್ಯಕರ್ತರೇ ಆಗಿದ್ದೇವೆ. ಅವರನ್ನು ಏಕಾಂಗಿಯಾಗಿಸುವ ಪ್ರಶ್ನೆಯೇ ಇಲ್ಲ’ ಎಂದೂ ಸುಧಾಕರ್ ಹೇಳಿದರು.