ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕರ್ಫ್ಯೂ ಆರಂಭ: 14 ದಿನ ಏನಿರುತ್ತೆ.. ಏನಿರುವುದಿಲ್ಲ? ಇಲ್ಲಿದೆ ಮಾಹಿತಿ

Last Updated 27 ಏಪ್ರಿಲ್ 2021, 15:33 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶಿಸಿರುವ ಕೋವಿಡ್ ಕರ್ಫ್ಯೂ ಜಾರಿಗೆ ಬಂದಿದೆ. ರಾತ್ರಿ 9ರಿಂದ ಕೋವಿಡ್ ಕರ್ಫ್ಯೂ ಆರಂಭವಾಗಿದ್ದು, ಮೇ 12ರವರೆಗೆ 14 ದಿನಜಾರಿಯಲ್ಲಿರಲಿದೆ.

ಸಾರ್ವಜನಿಕರು ಪ್ರತಿ ದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆ ಬಳಿಕ ಎಲ್ಲ ವ್ಯಾಪಾರಸ್ಥರು ಅಂಗಡಿಗಳ ಬಾಗಿಲು ಹಾಕಿಕೊಂಡು ಹೋಗಬೇಕು. ಪೊಲೀಸರ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು’ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜನರಿಗೆ ಮನವಿ ಮಾಡಿದ್ದಾರೆ.

ಉತ್ಪಾದನಾ ವಲಯಕ್ಕೆ ರಿಯಾಯ್ತಿ: ಗಾರ್ಮೆಂಟ್‌ ಉದ್ಯಮ ಹೊರತುಪಡಿಸಿ ಉಳಿದ ಎಲ್ಲ ಉತ್ಪಾದನಾ ಘಟಕಗಳ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ನೀಡಲಾಗುವುದು. ಗಾರ್ಮೆಂಟ್ಸ್‌ಗಳಲ್ಲಿ ಒಂದೇ ಸೂರಿನಡಿ ಸಾವಿರಾರು ಜನ ಕುಳಿತು ಕೆಲಸ ಮಾಡುತ್ತಾರೆ. ನಗರದಲ್ಲಿ 7 ರಿಂದ 8 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ.

ಮೆಟ್ರೊ ಮತ್ತು ಸಾರಿಗೆ ಇಲ್ಲ
ಅಂತರ್‌ ಜಿಲ್ಲೆ ಮತ್ತು ನೆರೆಯ ರಾಜ್ಯಗಳಿಗೆ ಹೋಗಲು ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್‌ಗಳು ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಬಸ್‌ ಅಥವಾ ಇತರ ವಾಹನಗಳಲ್ಲಿ ತೆರಳಲು ಅವಕಾಶ. ಬೆಂಗಳೂರಿನಲ್ಲಿ ಮೆಟ್ರೊ ಮತ್ತು ಬಿಎಂಟಿಸಿ ಬಸ್‌ಗಳು ಇರುವುದಿಲ್ಲ. ಉಳಿದ ನಗರಗಳಲ್ಲೂ ಸ್ಥಳೀಯ ಸಾರಿಗೆ ಬಸ್ಸುಗಳು ಇರುವುದಿಲ್ಲ.

ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರಬಾರದು ಎಂಬ ಕಾರಣಕ್ಕೆ ಆಟೊ ಸೇರಿದಂತೆ ಯಾವುದೇ ವಾಹನಗಳ ಸಂಚಾರಕ್ಕೂ ಆವಕಾಶ ಇರುವುದಿಲ್ಲ. ಆಸ್ಪತ್ರೆಗೆ ಹೋಗುವ ವಾಹನಗಳಿಗೆ ರಿಯಾಯ್ತಿ ಇದೆ. ಕೈಗಾರಿಕಾ ಘಟಕಗಳು ಕಾರ್ಮಿಕರನ್ನು ಒಯ್ಯಲು ತಮ್ಮದೇ ವಾಹನ ಮಾಡಿಕೊಳ್ಳಬೇಕು. ಅದಕ್ಕೆ ಪೂರ್ವಾನುಮತಿ ಪಡೆಯಬೇಕು ಮತ್ತು ವಾಹನಗಳಲ್ಲಿ ಕಾರ್ಖಾನೆ ಸಿಬ್ಬಂದಿ ಗುರುತಿನ ಚೀಟಿ ಹೊಂದಿರಬೇಕು.

ಕಸಾಪ ಚುನಾವಣೆ ಮುಂದೂಡಿಕೆ
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮುಂದೂಡಲಾಗಿದೆ. ಮೇ 9 ಕ್ಕೆ ಚುನಾವಣೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು.

ಒಕ್ಕಲಿಗರ ಸಂಘದ ಚುನಾವಣೆಯನ್ನೂ ಮುಂದೂಡಲಾಗಿದೆ.

ಯಾವುದೆಲ್ಲ ಇರಲಿದೆ
* ನಿರ್ಮಾಣ ವಲಯ
* ಕೃಷಿ ಚಟುವಟಿಕೆಗಳು
* ಉದ್ಯಮ, ದೂರಸಂಪರ್ಕ, ಇಂಟರ್‌ನೆಟ್‌
* ಆರೋಗ್ಯ ಸೇವೆಗಳು, ಕ್ಲಿನಿಕ್, ಮೆಡಿಕಲ್ ಶಾಪ್‌
* ಅಂತರ ರಾಜ್ಯ ಗೂಡ್ಸ್‌ ವಾಹನಗಳಿಗೆ ಅವಕಾಶ
* ಅಗತ್ಯ ಸೇವೆ ಒದಗಿಸುವ ಸರ್ಕಾರದ ವಿವಿಧ ಇಲಾಖೆಗಳ ನೌಕರರಿಗೆ ಅವಕಾಶ
* ಕೋವಿಡ್ ಸಂಬಂಧಿತ ಕರ್ತವ್ಯದಲ್ಲಿರುವ ಸಿಬ್ಬಂದಿ ಹಾಜರಿ
* 50 ಜನಕ್ಕೆ ಸೀಮಿತವಾಗಿ ಮದುವೆಗಳನ್ನು ನಡೆಸಬಹುದು.
* ವಿಮಾನ, ರೈಲು ಪ್ರಯಾಣದ ಟಿಕೆಟ್ ಇದ್ದರೆ ಬಸ್, ಆಟೊ, ಟ್ಯಾಕ್ಸಿಗಳಿಗೆ ಅವಕಾಶ
* ನರೇಗಾ ಕಾಮಗಾರಿಗಳು
* ಕಾರ್ಗೊ ಮತ್ತು ಇ–ಕಾಮರ್ಸ್‌
* ಆರೋಗ್ಯ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಆಟೊ ಮತ್ತು ಟ್ಯಾಕ್ಸಿ ಬಳಕೆ
* ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಆಟೊ– ಟ್ಯಾಕ್ಸಿ ಬಳಸಬಹುದು. ಗುರುತಿನ ಚೀಟಿ ಇರಬೇಕು

ಬೆಳಿಗ್ಗೆ 6 ರಿಂದ 10 ರವರೆಗೆ
* ನ್ಯಾಯಬೆಲೆ ಅಂಗಡಿ, ಕಿರಾಣಿ ಅಂಗಡಿ, ದಿನಸಿ, ಹಣ್ಣು, ತರಕಾರಿ, ಹಾಲು, ಮಾಂಸ, ಮೀನು, ಪಶು ಆಹಾರ ಅಂಗಡಿಗೆ ಅವಕಾಶ
* ರೆಸ್ಟೋರೆಂಟ್‌, ಮದ್ಯದಂಗಡಿ, ಉಪಹಾರ ಗೃಹಗಳಿಂದ ಪಾರ್ಸೆಲ್‌ ಸೇವೆ ಮಾತ್ರ
* ಪೆಟ್ರೋಲ್ ಬಂಕ್‌, ಎಟಿಎಂಗಳಿಗೆ ಅವಕಾಶ

ಏನೇನು ಇರುವುದಿಲ್ಲ
* ದೇವಸ್ಥಾನ, ಮಸೀದಿ, ಚರ್ಚ್‌ಗಳು
* ಶಾಲಾ– ಕಾಲೇಜುಗಳು
* ಸಿನಿಮಾ ಮಂದಿರ, ಶಾಪಿಂಗ್‌ ಮಾಲ್‌, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾಂಗಣ, ಈಜುಕೊಳ
* ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಮಾವೇಶಗಳು
* ಸರ್ಕಾರಿ ಮತ್ತು ಖಾಸಗಿ ಬಸ್‌, ತುರ್ತು ಸಂದರ್ಭ ಬಿಟ್ಟು ಆಟೋ, ಕಾರು ಯಾವುದೂ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT