ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಸರ್ಕಾರ ತನ್ನ ಸಲಹೆಗಾರರ ಮಾತು ಒಪ್ಪಲು ಸಿದ್ಧವಿದೆಯೇ? –ಡಿಕೆಶಿ

Last Updated 2 ಜೂನ್ 2021, 12:04 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಲಸಿಕೆ ವಿಚಾರದಲ್ಲಿ ಸರ್ಕಾರ ತನ್ನ ಸಲಹೆಗಾರ, ಖ್ಯಾತ ವೈರಾಣು ತಜ್ಞ ಗಗನ್ ದೀಪ್ ಕಾಂಗ್ ಅವರ ಮಾತು ಕೇಳಿದರೆ ಸಾಕು, ಪರಿಣಾಮಕಾರಿಯಾಗಿ ಲಸಿಕೆ ವಿತರಣೆ ಮಾಡಬಹುದು. ಆದರೆ, ಸರ್ಕಾರ ತನ್ನ ಸಲಹೆಗಾರರ ಮಾತನ್ನು ಒಪ್ಪಲು ಸಿದ್ಧವಿದೆಯೇ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

‘ಕಾಂಗ್‌ ಅವರು ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನಲ್ಲಿ ವೈರಾಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕರು. ಕಳೆದ ತಿಂಗಳು ರಾಜ್ಯ ಸರ್ಕಾರ ಅವರನ್ನು ಲಸಿಕೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತ್ತು. ಕಾಂಗ್ ಅವರ ನೇಮಕವಾದಾಗ ಸರ್ಕಾರ ಕಡೆಗೂ ವಿಜ್ಞಾನಿಗಳ ಸಲಹೆ ಪಡೆಯಲು ಮುಂದಾಗಿದೆ ಎಂದು ಭಾವಿಸಿದ್ದೆವು. ಆದರೆ, ಸಲಹೆಗಾರರ ಅಭಿಪ್ರಾಯಕ್ಕೂ ಸರ್ಕಾರದ ನಿರ್ಧಾರಗಳಿಗೂ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ, ಸರ್ಕಾರ ಕೇವಲ ಪ್ರಚಾರಕ್ಕೆ ಮಾತ್ರ ಸಲಹೆಗಾರರನ್ನು ನೇಮಕ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತಿದೆ’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ ಅವರು ಕೋವಿಡ್ ನಿರ್ವಹಣೆ ವಿಚಾರವಾಗಿ ವ್ಯಕ್ತಪಡಿಸಿರುವ 10 ಅಂಶಗಳನ್ನು ಡಿ.ಕೆ. ಶಿವಕುಮಾರ್ ಅವರು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ‘ಕಾಂಗ್ ಅವರ ಅಭಿಪ್ರಾಯಗಳನ್ನು ಸರ್ಕಾರ ಪರಿಗಣಿಸುತ್ತದೆಯೇ’ ಎಂದೂ ಪ್ರಶ್ನಿಸಿದ್ದಾರೆ.

ಲಸಿಕೆ ಖರೀದಿಯಲ್ಲಿ ವಿಳಂಬ: ‘ಲಸಿಕೆ ಖರೀದಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮಾಡಬೇಕೇ ಹೊರತು, ರಾಜ್ಯ ಸರ್ಕಾರವಲ್ಲ ಎಂದು ಸಲಹೆಗಾರರು ಅಭಿಪ್ರಾಯಪಟ್ಟಿದ್ದು, ಇದನ್ನು ಸರ್ಕಾರ ಒಪ್ಪುತ್ತದೆಯೇ? ಇನ್ನು ಕೇಂದ್ರ ಸರ್ಕಾರ ಜಾಗತಿಕ ಕಂಪನಿಗಳಿಂದ ಲಸಿಕೆ ಖರೀದಿಯಲ್ಲಿ ವಿಳಂಬ ಮಾಡಿದೆ ಎಂಬುದನ್ನಾದರೂ ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ಎಂದು ಶಿವಕುಮಾರ್‌ ಕೇಳಿದ್ದಾರೆ.

ಜಾಗತಿಕ ಟೆಂಡರ್: ಜಾಗತಿಕ ಟೆಂಡರ್‌ನಿಂದ ಸಂಪನ್ಮೂಲ ವ್ಯರ್ಥ ಎಂದು ಕಾಂಗ್ ಹೇಳಿರುವ ದಾಖಲೆಗಳಿವೆ. ಹಾಗಾದರೆ, ರಾಜ್ಯ ಸರ್ಕಾರ ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿ ನಿರ್ಧಾರದಲ್ಲಿ ಸಲಹೆಗಾರರ ಅಭಿಪ್ರಾಯ ಪರಿಗಣಿಸಿದೆಯೇ ಎಂಬ ಅನುಮಾನವಿದೆ. ಸರ್ಕಾರ ಜಾಗತಿಕ ಟೆಂಡರ್ ಮೂಲಕ ಎಷ್ಟು ಪ್ರಮಾಣದ ಲಸಿಕೆಯನ್ನು, ಯಾವಾಗ ಖರೀದಿ ಮಾಡಲಿದೆ ಎಂಬ ಮಾಹಿತಿ ನೀಡಬೇಕು ಎಂದು ಅವರು ಪತ್ತಾಯಿಸಿದ್ದಾರೆ.

‘ಕೇಂದ್ರ ಸರ್ಕಾರ ಈ ವರ್ಷ ಡಿಸೆಂಬರ್ ವೇಳೆಗೆ 2 ಕೋಟಿ ಡೋಸ್ ಲಸಿಕೆ ಖರೀದಿ ಮಾಡುವುದಾಗಿ ತಿಳಿಸಿದ್ದು, ಕಾಂಗ್ ಅವರು, ‘ಇದು ವಾಸ್ತವಾಂಶಕ್ಕೆ ದೂರವಾದದ್ದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಲಹೆಗಾರರ ಅಭಿಪ್ರಾಯವನ್ನು ಸರ್ಕಾರ ಒಪ್ಪುತ್ತದೆಯೇ? ರಾಜ್ಯದಲ್ಲಿರುವ ಎಲ್ಲ ವಯಸ್ಕರಿಗೂ ಲಸಿಕೆ ನೀಡಲು ಹಾಕಿಕೊಂಡಿರುವ ಕಾಲಮಿತಿಯ ಬಗ್ಗೆ ವಿವರ ನೀಡುತ್ತದೆಯೇ. ಜನವರಿ ತಿಂಗಳಲ್ಲಿ ಕೋವ್ಯಾಕ್ಸಿನ್ ಅಂತಿಮ ಪರೀಕ್ಷೆ ವರದಿ ಪ್ರಕಟವಾಗುವ ಮುನ್ನವೇ ಅದರ ಬಳಕೆಗೆ ಅನುಮತಿ ನೀಡಿದ್ದನ್ನು ಕಾಂಗ್ ಅವರು ಪ್ರಶ್ನಿಸಿದ್ದರು. ಜತೆಗೆ, ಕೋವ್ಯಾಕ್ಸಿನ್ ಅಂತಿಮ ಪರೀಕ್ಷಾ ವರದಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ತನ್ನ ಸಲಹೆಗಾರರ ಅಭಿಪ್ರಾಯವನ್ನು ಬೆಂಬಲಿಸುತ್ತದೆಯೇ’ ಎಂದು ಎಂದೂ ಶಿವಕುಮಾರ್‌ ಹೇಳಿದ್ದಾರೆ.

ಎರಡನೇ ಅಲೆ ಕುರಿತ ಎಚ್ಚರಿಕೆಯ ನಿರ್ಲಕ್ಷ್ಯ: ‘ದೇಶದಲ್ಲಿ ಎರಡನೇ ಅಲೆ ವಿಚಾರವಾಗಿ ಕೇಂದ್ರದ ನಿರ್ಲಕ್ಷ್ಯವನ್ನು ಕಾಂಗ್ ಅವರು ಪ್ರಶ್ನಿಸಿದ್ದರು. ಅವರನ್ನು ರಾಜ್ಯದ ಲಸಿಕೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡ ನಂತರವೂ ಸರ್ಕಾರ ಮಾರ್ಚ್ ತಿಂಗಳಲ್ಲಿ ಸೋಂಕು ಪ್ರಕರಣ ಹೆಚ್ಚಳದ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿತ್ತು ಎಂಬುದನ್ನು ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ಕೋವಿಡ್ ಅನ್ನು ಪೂರ್ಣ ಪ್ರಮಾಣದಲ್ಲಿ ಮಣಿಸಲು ತಂತ್ರಗಾರಿಕೆ ಇದೆಯೇ’ ಎಂದು ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಗಗನ್ ದೀಪ್ ಕಾಂಗ್ ಅವರು ಸಂದರ್ಶನವೊಂದರಲ್ಲಿ, ‘ನಾವು ಪ್ರಸ್ತುತ ರೀತಿಯಲ್ಲೇ ಸಾಗಿದರೆ ನಿರಂತರವಾಗಿ ಸೋಂಕು ಹರಡುತ್ತಾ ಹೋಗುತ್ತದೆ. ನಂತರ ಅದು ಅತ್ಯಂತ ಮಾರಕ ವೈರಾಣುವಾಗಿ ರೂಪುಗೊಳ್ಳಬಹುದು. ಆಗ ಪ್ರತಿ ವರ್ಷ ಒಂದು ಅಥವಾ ಎರಡು ಅಲೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಈ ಸಲಹೆಯನ್ನಾದರೂ ಕೇಳುತ್ತದೆಯೇ? ಎಂದೂ ಶಿವಕುಮಾರ್‌ ಕೆಣಕಿದ್ದಾರೆ

ಕೇಂದ್ರ ಸರ್ಕಾರ ಸೋಂಕು ಪ್ರಕರಣ ಹಾಗೂ ಲಸಿಕೆ ಕುರಿತ ನೈಜ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಆಗ ಮಾತ್ರ ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯ. ಕಳಪೆ ಅಂಕಿ-ಅಂಶಗಳಿಂದಾಗಿ ಲಸಿಕೆ ಕಾರ್ಯಕ್ರಮದ ಪರಿಣಾಮವನ್ನು ಅಳೆಯಲು ಸಾಧ್ಯವಾಗುತ್ತಿಲ್ಲ’ ಎಂದೂ ಕಾಂಗ್‌ ತಿಳಿಸಿದ್ದಾರೆ. ಭಾರತದಲ್ಲಿ ಲಸಿಕೆ ಸಾಮರ್ಥ್ಯದ ಬಗ್ಗೆ ಅಧ್ಯಯನ, ಸಮೀಕ್ಷೆ, ವೈಜ್ಞಾನಿಕ ವಿಶ್ಲೇಷಣೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಕಾಳಸಂತೆಯಲ್ಲಿ ಲಸಿಕೆ ಮಾರಿಕೊಳ್ಳಲು ಅವಕಾಶ ನೀಡುವುದನ್ನು ಬಿಟ್ಟು, ಕೋವಿಡ್ ನಿರ್ವಹಣೆ ವಿಚಾರದಲ್ಲಿ ತನ್ನ ಸಲಹೆಗಾರರ ಮಾತು ಕೇಳಬೇಕು’ ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT