ಬೆಂಗಳೂರು: ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೋವಿಡ್ ದೃಢಪಟ್ಟ ಕಾರಣ ಯಡಿಯೂರಪ್ಪ ಅವರನ್ನು ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಸುದರ್ಶನ್ ಬಲ್ಲಾಳ್ ನೇತೃತ್ವದ ತಜ್ಞ ವೈದ್ಯರ ತಂಡ ಮುಖ್ಯಮಂತ್ರಿಯ ಆರೋಗ್ಯ ಸ್ಥಿತಿ ಮೇಲೆ ನಿಗಾ ಇರಿಸಿದೆ.
ವೈದ್ಯರು ಈಗಾಗಲೇ ಮುಖ್ಯಮಂತ್ರಿ ಅವರನ್ನು ವಿವಿಧ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆಯಲ್ಲಿ ಎಲ್ಲವೂ ಕೂಡ ಸಾಮಾನ್ಯವಾಗಿದೆ. ಶ್ವಾಸಕೋಶಕ್ಕೆ ಸೋಂಕು ತಗಲುವ ಸಾಧ್ಯತೆಯ ಕಾರಣ ಶ್ವಾಸಕೋಶ ಸಂಬಂಧ ಎಕ್ಸ್ ರೇ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದೂ ಮೂಲಗಳು ಹೇಳಿವೆ.