ಬಾಗಲಕೋಟೆ: ಸರ್ಜಿಕಲ್ ಸ್ಟ್ರೈಕ್, ಸಿಎಎ ವಿರೋಧಿಸಿದ್ದ ಅದೇ ಜನರೇ ಇಂದು ದುರುದ್ದೇಶದಿಂದ ಕೃಷಿ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಅಪಪ್ರಚಾರ ಮಾಡಿ ರೈತರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯಲ್ಲಿ ಭಾನುವಾರ ಎಂ.ಆರ್.ಎನ್ ಉದ್ಯಮ ಸಮೂಹದ ಎರಡು ಸಕ್ಕರೆ ಕಾರ್ಖಾನೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಯ್ದೆ ಜಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರನ್ನು ದಲ್ಲಾಳಿಗಳ ಶೋಷಣೆಯಿಂದ ತಪ್ಪಿಸಿ ಅವರ ಕೈಗೆ ಹಾಕಿರುವ ಬೇಡಿ ತೆಗೆದು ಸ್ವತಂತ್ರ ಮಾಡಿದ್ದಾರೆ. ಆದರೆ ಕೆಲವರು ದುರುದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಮೋದಿ ಏನು ಮಾಡಿದರೂ ಅದರಲ್ಲಿ ತಪ್ಪು ಹುಡುಕುವ ಕೆಲಸ ಅವರು ಮಾಡುತ್ತಾರೆ ಎಂದು ಕಿಡಿಕಾರಿದರು.
ಕೃಷಿ ಕಾಯ್ದೆ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಬದಲಿಗೆ ಅವರ ಆದಾಯ ದುಪ್ಟಟ್ಟುಗೊಳಿಸಲಿದೆ. ಹೀಗಾಗಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿಡಿ. ನಾವೆಲ್ಲರೂ ಜೊತೆಯಾಗಿ, ತಾಯಿ ಭಾರತಿಯನ್ನು ಬಲಗೊಳಿಸುವ ಕಾರ್ಯದ ಹಿಂದೆ ಅವರ ಬೆನ್ನಿಗೆ ನಿಲ್ಲೋಣ ಎಂದು ರೈತರಿಗೆ ಮನವಿ ಮಾಡಿದರು.