ಬೆಂಗಳೂರು: ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಮುಂದಾಗುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ವಾಟಾಳ್ ನಾಗರಾಜ್ ನೇತೃತ್ವದ ವಿವಿಧ ಕನ್ನಡಪರ ಸಂಘಟನೆಗಳು ಶುಕ್ರವಾರ (ಡಿಸೆಂಬರ್ 31) ರಂದು ಕರೆ ನೀಡಿದ್ದ ಕರ್ನಾಟಕ ಬಂದ್ ವಾಪಸ್ ಪಡೆಯಲಾಗಿದೆ.
ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸಭೆ ಯಶಸ್ವಿಯಾಗಿದೆ.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿರುವ ವಾಟಾಳ್ ನಾಗರಾಜ್, ಎಂಇಎಸ್ ನಿಷೇಧಿಸಲು ಮುಖ್ಯಮಂತ್ರಿ ಅವರು ಸಮಯ ಕೇಳಿದ್ದಾರೆ. ಅವರ ಮೇಲೆ ಭರವಸೆ ಇಟ್ಟು ಕರ್ನಾಟಕ ಬಂದ್ ಮುಂದೂಡಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಿಎಂ ಬೊಮ್ಮಾಯಿ ಅವರು, ನಮ್ಮ ಮನವಿ ಮೇರೆಗೆ ಬಂದ್ ಕೈ ಬಿಡಲು ನಿರ್ಧರಿಸಿದ್ದಾರೆ, ಅವರಿಗೆ ಧನ್ಯವಾದಗಳು, ಎಂಇಎಸ್ ಬಗ್ಗೆ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಭೆಯಲ್ಲಿ ಪ್ರವೀಣ್ ಶೆಟ್ಟಿ ಸೇರಿದಂತೆ ಇತರ ನಾಯಕರು ಇದ್ದರು. ನಾಳಿನ ಉದ್ದೇಶಿತ ಬಂದ್ಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.