ಬೆಂಗಳೂರು: ‘ಎಲ್ಲಿದೆ ಗುಜರಾತ್ ಮಾದರಿ? ನಿರುದ್ಯೋಗ ಸೃಷ್ಟಿಯೇ ಗುಜರಾತ್ ಮಾದರಿಯಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದ ತಂಡದ ಗುಜರಾತ್ ಪ್ರವಾಸ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಲಾಕ್ಡೌನ್, ಸೀಲ್ಡೌನ್ ಎಲ್ಲ ಮಾಡಲಾಯಿತು. ಉದ್ಯಮಿಗಳ ಪರ ಎಂದು ಬಿಂಬಿಸಿಕೊಂಡ ಬಿಜೆಪಿ ಸರ್ಕಾರ, ತೆರಿಗೆಯನ್ನು ಏಕೆ ಮನ್ನಾ ಮಾಡಲಿಲ್ಲ’ ಎಂದು ಕೇಳಿದರು.
‘ಸರ್ಕಾರದವರು ಅಧ್ಯಯನ ಮಾಡಲು ಗುಜರಾತ್ಗೆ ಹೋಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವ ಮಾದರಿಯನ್ನಾದರೂ ಅವರು ನೀಡಲಿ. ಆದರೆ, ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಆಗ್ರಹಿಸಿದರು.
ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿಯವರು ಧ್ವನಿ ಎತ್ತಬೇಕು. ಗುಜರಾತ್ಗೆ ನೀಡಿರುವ ಲಸಿಕೆಯ ಅರ್ಧದಷ್ಟನ್ನೂ ಕರ್ನಾಟಕಕ್ಕೆ ನೀಡಿಲ್ಲ. ಗುಜರಾತ್ಗೆ ಸರಿಸಮನಾಗಿ ಲಸಿಕೆ ಹಂಚಿಕೆ ಮಾಡುವಂತೆ ಬೇಡಿಕೆ ಇಡಬೇಕು ಎಂದು ಶಿವಕುಮಾರ್ ಹೇಳಿದರು.