ಬೆಳಗಾವಿ: ‘ಈಗಿನ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ಅನುಭವಿಸುತ್ತಿರುವವರು ಕಾಂಗ್ರೆಸ್–ಜೆಡಿಎಸ್ನಿಂದ ಬಂದ 17 ಮಂದಿಯ ತ್ಯಾಗ ಮರೆಯಬಾರದು’ ಎಂದು ಬಿಜೆಪಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೋರಿದರು.
ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ನಾನಾಗಲಿ, ಶಾಸಕ ರಮೇಶ ಜಾರಕಿಹೊಳಿ ಅವರಾಗಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ. ರಮೇಶ, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ ಸೇರಿದಂತೆ ಬೇರೆ ಪಕ್ಷದಿಂದ ಬಂದವರ ತ್ಯಾಗದಿಂದಾಗಿ ಅಧಿಕಾರದಲ್ಲಿದ್ದೀರಿ ನೆನಪಿರಲಿ’ ಎಂದರು.
ಪರೋಕ್ಷ ವಾಗ್ದಾಳಿ: ‘ಅವರು ಬರಲಿಲ್ಲ ಎಂದರೆ ಯಾರೂ ಸಚಿವ, ರಾಜ್ಯಸಭಾ ಸದಸ್ಯ, ಉಪ ಮುಖ್ಯಮಂತ್ರಿ ಆಗುತ್ತಿರಲಿಲ್ಲ’ ಎಂದು ಉಮೇಶ ಕತ್ತಿ, ಈರಣ್ಣ ಕಡಾಡಿ ಹಾಗೂ ಲಕ್ಷ್ಮಣ ಸವದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
‘ಬೆಳಗಾವಿಯಲ್ಲಿ ಈಚೆಗೆ ನಡೆಸಿದ ಸಭೆಗೆ ನಮ್ಮನ್ನು ಯಾರೂ ಕರೆದಿಲ್ಲ. ಸಭೆ ನಾನು ಕರೆದಿಲ್ಲ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ. ಅಧಿಕೃತ ಸಭೆಯಾಗಿದ್ದರೆ ಆಹ್ವಾನಿಸಬೇಕಿತ್ತು. ಪಕ್ಷದವರೆ ಸ್ಪಷ್ಟಪಡಿಸಬೇಕು’ಎಂದರು.
‘ಪಕ್ಷದ ದೃಷ್ಟಿಯಿಂದ ಅದು ಒಳ್ಳೆಯ ಬೆಳವಣಿಗೆಯಲ್ಲ. ಮುಖಂಡರು ಕೂಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನಾಯಕರು ಹಾಗೂ ಆರ್ಎಸ್ಎಸ್ನವರು ಗಮನಿಸುತ್ತಿದ್ದಾರೆ. ಸರಿಪಡಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.