ಬೆಂಗಳೂರು: ‘ಪಾದಯಾತ್ರೆಗೆ ಗೃಹ ಸಚಿವರ ಅನುಮತಿಯೂ ಬೇಡ, ರಕ್ಷಣೆಯೂ ಬೇಡ. ಯಾರಾದ್ರೂ ಕೋಳಿ ಕೇಳಿ ಮಸಾಲೆ ಅರಿತಾರಾ’ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೇವೇಗೌಡರು, ಚಂದ್ರಶೇಖರ್ ಪಾದಯಾತ್ರೆ ನಡೆಸಿದಾಗ ಸ್ಟ್ಯಾಂಪ್ ಹಾಕಿ ಅನುಮತಿ ಕೊಟ್ಟಿದ್ದರಾ’ ಎಂದೂ ಪ್ರಶ್ನಿಸಿದರು.
‘ಗೃಹ ಸಚಿವರು ವಯಸ್ಸಿನಲ್ಲಿ ದೊಡ್ಡವರಿರಬಹುದು. ಆದರೆ, ರಾಜಕೀಯದಲ್ಲಿ ಎಳಸು’ ಎಂದು ಆರಗ ಜ್ಞಾನೇಂದ್ರ ಅವರನ್ನು ಲೇವಡಿ ಮಾಡಿದ ಶಿವಕುಮಾರ್, ‘ಪಾದಯಾತ್ರೆಗೆ ಗೃಹ ಸಚಿವರು ಬಂದರೆ, ಅವರಿಗೆ ಬ್ಯಾಲದ ಹಣ್ಣಿನ ಪಾನಕ ಕುಡಿಸಿ ಕಳಿಸುತ್ತೇವೆ. ರಾಮ ರಸ ಅಲ್ಲ, ಪಾನಕ ಕುಡಿಸಿ ಕಳುಹಿಸುತ್ತೇವೆ’ ಎಂದರು.
‘ಪಾದಯಾತ್ರೆ ವಿಚಾರದಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಪಾದಯಾತ್ರೆಯಲ್ಲಿ 4–5 ಆಂಬ್ಯುಲೆನ್ಸ್ಗಳು ಇರುತ್ತವೆ. ಎಳೆನೀರು ಕೊಡಲು ಮಂಡ್ಯ, ಮದ್ದೂರು ಜನ ಇರುತ್ತಾರೆ. ನೂರೋ, ಐನೂರೋ ಅಥವಾ ಐದು ಸಾವಿರ ಜನ ಬರುತ್ತಾರೋ ಎಲ್ಲರಿಗೂ ಆಹ್ವಾನ ಕೊಡುತ್ತಿದ್ದೇವೆ. ಯಾರಿಗೂ ಬಲವಂತ ಇಲ್ಲ’ ಎಂದರು.