ಕಂಗಾಲಾದ ಮೇಳಕುಂದಿ, ಕಾಶಿನಾಥ ಇಬ್ಬರೂ ಆರ್.ಡಿ.ಪಾಟೀಲ ಮನೆಗೆ ಸಂಧಾನಕ್ಕೆ ತೆರಳುತ್ತಾರೆ. ಅಲ್ಲಿಂದಲೇ ಸಾಲಿ ಅವರಿಗೆ ವಾಟ್ಸ್ಆ್ಯಪ್ ಕರೆ ಮಾಡಿದ ಪಾಟೀಲ ಇಬ್ಬರೂ ಮನೆಗೆ ಬಂದಿದ್ದನ್ನು ತಿಳಿಸುತ್ತಾರೆ. ಅದೇ ಫೋನ್ನಲ್ಲಿ ಮೇಳಕುಂದಿ, ಕಾಶೀನಾಥ ಅವರೊಂದಿಗೆ ಮಾತನಾಡಿದ ಸಾಲಿ, ‘ಪ್ರಕರಣ ಮುಚ್ಚಿಹಾಕಲು ₹80 ಲಕ್ಷ ಕೊಡಬೇಕು’ ಎಂದು ಬೇಡಿಕೆ ಇಡುತ್ತಾರೆ. ಆದರೆ, ಅಷ್ಟು ಕೊಡಲು ಆಗುವುದಿಲ್ಲ. ₹10 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದಕ್ಕೆ ಒಪ್ಪುತ್ತಾರೆ. ಅದಾದ ಎರಡು ದಿನದ ಬಳಿಕ ₹500 ಮುಖಬೆಲೆಯ ₹10 ಲಕ್ಷ ಮೊತ್ತದ 20 ಬಂಡಲ್ ನೋಟುಗಳನ್ನು ಪಾಟೀಲಗೆ ತಲುಪಿಸುತ್ತಾರೆ. ಅದೇ ದಿನ ರಾತ್ರಿ ಈ ಹಣವನ್ನು ಕಲಬುರಗಿಯ ಉದನೂರ ರಸ್ತೆಯಲ್ಲಿ ಸಾಲಿ ಅವರಿಗೆ ತಲುಪಿಸಿದ್ದಾಗಿ ಪಾಟೀಲ ಒಪ್ಪಿಕೊಂಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಚಾರ್ಜ್ ಶೀಟ್ನಲ್ಲಿ ದಾಖಲಿಸಿದ್ದಾರೆ.