ಬೆಂಗಳೂರು: ಹೊಸನಗರ ತಾಲ್ಲೂಕಿನ ಹನಿಯಾ ಗ್ರಾಮದ ದ್ವಿತೀಯ ಪಿಯು ವಿದ್ಯಾರ್ಥಿನಿ ಎಚ್.ಆರ್. ಧರಣಿ ಎಂಬಾಕೆಗೆ ಉತ್ತರ ಪತ್ರಿಕೆಯ ಮರು ಎಣಿಕೆಯಲ್ಲಿ ಕಡಿಮೆ ಅಂಕ ನೀಡಲಾದ ಪ್ರಕರಣಕ್ಕೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ತಕ್ಷಣವೇ ವರದಿ ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಪಿಯು ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಬಂದಾಗ ತನಗೆ 100 ಅಂಕ ಬರಬೇಕಿತ್ತೆಂಬ ಉತ್ತರಪತ್ರಿಕೆ ಛಾಯಾ ಪತ್ರಿಕೆ ತರಿಸಿ ನೋಡಿದಾಗ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿ ತನಗೆ ಒಂದು ಅಂಕ ಕಡಿಮೆ ಬಂದಿದ್ದು, ಹೀಗಾಗಿ ಮರುಎಣಿಕೆಗೆ ಅರ್ಜಿ ಸಲ್ಲಿಸಿದಾಗ 88 ಅಂಕಗಳು ಬಂದಿದ್ದವು.
ಈ ಕುರಿತು ವಿದ್ಯಾರ್ಥಿನಿ ರಾಜ್ಯ ಹೈಕೋರ್ಟ್ ಮೊರೆ ಹೋದಾಗ ಹೈಕೋರ್ಟ್ ಮರುಎಣಿಕೆಗೆ ಆದೇಶಿಸಿದ್ದು, ಆ ನಂತರ 100 ಅಂಕಗಳು ಬಂದಿದ್ದವು. ಈ ಕುರಿತು ಮರು ಎಣಿಕೆಯಲ್ಲಿ ಲೋಪ ಎಸಗಿದ ಅಧಿಕಾರಿ, ಉಪನ್ಯಾಸಕರು ಮತ್ತು ಸಂಬಂಧಿಸಿದ ಸಿಬ್ಬಂದಿಯ ವಿರುದ್ಧ ಅಗತ್ಯ ಕ್ರಮಕೈಗೊಳ್ಳಲು ಸಂಬಂಧಿಸಿದವರ ವಿವರಗಳೊಂದಿಗೆ ಎರಡು ದಿನಗಳೊಳಗೆ ವರದಿ ಸಲ್ಲಿಸಬೇಕೆಂದು ಸಚಿವರು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ವಿದ್ಯಾರ್ಥಿನಿಗೆ ನ್ಯಾಯದೊರೆತದ್ದು ಸಂತಸ ಸಂಗತಿಯಾಗಿದ್ದರೂ ಇಲಾಖೆ ಅಧಿಕಾರಿಗಳ ಕರ್ತವ್ಯ ಚ್ಯುತಿಯಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುವಂತಾಗಿದ್ದು, ವ್ಯವಸ್ಥೆ ಕುರಿತು ಭರವಸೆ ಕಳೆದುಕೊಳ್ಳುವಂತಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯ ನೆರವಿಗೆ ಬರಬೇಕಾದ ಇಲಾಖೆ ಆಕೆಯ ಆತ್ಮವಿಶ್ವಾಸ ಕಸಿಯುವ ಕೆಲಸ ಮಾಡಿದೆ. ಇದಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ, ತಕ್ಷಣವೇ ಈ ಕುರಿತು ವರದಿ ಸಲ್ಲಸುವಂತೆ ಪಿಯು ನಿರ್ದೇಶಕರಿಗೆ ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಹೊಸನಗರ ತಾಲೂಕಿನ ಹನಿಯ ಗ್ರಾಮದ ವಿದ್ಯಾರ್ಥಿನಿ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಪಡೆದಿದ್ದಳು. ತನಗೆ 100 ಅಂಕಗಳು ಬರಬೇಕಿತ್ತೆಂಬ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯ ಛಾಯಾಪ್ರತಿ ತರಿಸಿ ನೋಡಿದಾಗ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದ್ದು ಕಂಡು ಬಂದ ನಂತರ ಮರು ಎಣಿಕೆಗೆ ಅರ್ಜಿ ಹಾಕಿದ್ದರು. ಆದರೆ ಮರುಎಣಿಕೆಯಲ್ಲಿ ವಿದ್ಯಾರ್ಥಿನಿಗೆ 88 ಅಂಕಗಳನ್ನು ನೀಡಲಾಗಿತ್ತು. ಈ ಕುರಿತು ವಿದ್ಯಾರ್ಥಿನಿ ರಾಜ್ಯ ಹೈಕೋರ್ಟ್ ಮೊರೆ ಹೋದಾಗ ಮರುಎಣಿಕೆಗೆ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ 100 ಅಂಕಗಳು ಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.