ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಸೇರಿದಂತೆ ಸರ್ಕಾರಿ ದಾಖಲೆಗಳ ತಯಾರಿಕೆ ಜಾಲ!

ಸಿಸಿಬಿ ಪೊಲೀಸರ ಕಾರ್ಯಾಚರಣೆ l ಗುತ್ತಿಗೆ ನೌಕರರು ಸೇರಿ 9 ಮಂದಿ ಬಂಧನ
Last Updated 4 ಜನವರಿ 2021, 20:16 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಮತದಾರರ ಗುರುತಿನಚೀಟಿ, ಆಧಾರ್, ಪಾನ್‌ ಕಾರ್ಡ್ ಸೇರಿದಂತೆ ಹಲವು ಸರ್ಕಾರಿ ದಾಖಲೆಗಳನ್ನು ತಯಾರಿಸುತ್ತಿದ್ದ ಜಾಲವನ್ನು ನಗರದ ಸಿಸಿಬಿ ಪೊಲೀಸರು ಭೇದಿಸಿದ್ದು, ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.

'ಕನಕಪುರ ರಸ್ತೆಯ ಗುಬ್ಲಾಳ ಗ್ರಾಮದ ಕಮಲೇಶ್ ಕುಮಾರ್ ಭವಾಲಿಯಾ, ಪುಟ್ಟೇನಹಳ್ಳಿಯ ಎಸ್. ಲೋಕೇಶ್, ಶಾಂತಿನಗರದ ಸುದರ್ಶನ್, ನಿರ್ಮಲ್‌ಕುಮಾರ್, ಕೆಂಗೇರಿಯ ದರ್ಶನ್, ಹಾಸನ ಗವೇನಹಳ್ಳಿಯ ಶ್ರೀಧರ್, ಜ್ಞಾನಭಾರತಿಯ ಚಂದ್ರಪ್ಪ, ವಿಜಯನಗರ ಮಾರೇನಹಳ್ಳಿಯ ಅಭಿಲಾಶ್, ಬಸವೇಶ್ವರ ನಗರದ ತೇಜಸ್ ಹಾಗೂ ವಿಜಯನಗರದ ಶ್ರೀಧರ್ ದೇಶಪಾಂಡೆ ಬಂಧಿತರು. ಕೃತ್ಯದ ಬಗ್ಗೆ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ’ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ‘ಪತ್ರಿಕಾಗೋಷ್ಠಿ’ಯಲ್ಲಿ ಸೋಮವಾರ ತಿಳಿಸಿದರು.

‘ಸರ್ಕಾರದ ಕೆಲ ಇಲಾಖೆಗಳ ದಾಖಲೆ ತಯಾರಿಸುವ ಕೆಲಸವನ್ನು ರೋಸ್ ಮಾರ್ಟ್‌ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅದೇ ಕಂಪನಿಯಲ್ಲೇ ಆರೋಪಿಗಳಾದ ಎಸ್. ಲೋಕೇಶ್ ಹಾಗೂ ಇತರರು ಕೆಲಸ ಮಾಡುತ್ತಿದ್ದರು. ಕಂಪನಿ ವತಿಯಿಂದ ಮುದ್ರಿಸುತ್ತಿದ್ದ ಕಾರ್ಡ್‌ಗಳ ಬಗ್ಗೆ ಅವರಿಗೂ ಸಂಪೂರ್ಣ ಮಾಹಿತಿ ಇತ್ತು. ಕಂಪನಿಯ ಕಂಪ್ಯೂಟರ್‌ನಲ್ಲಿದ್ದ ದಾಖಲೆಗಳನ್ನು ಕದ್ದಿದ್ದ ಆರೋಪಿಗಳು, ಅದನ್ನೇ ಇತರೆ ಆರೋಪಿಗಳಿಗೆ ಕೊಟ್ಟು ನಕಲು ಮಾಡಲು ನೆರವಾಗಿದ್ದರು’ ಎಂದೂ ವಿವರ ನೀಡಿದರು.

‘ಆರೋಪಿಗಳಿಂದ 28,000ಕ್ಕೂ ಹೆಚ್ಚು ನಕಲಿ ಮತದಾರರ ಗುರುತಿನ ಚೀಟಿ, 9,000 ನಕಲಿ ಆಧಾರ್ ಕಾರ್ಡ್, 9,000 ನಕಲಿ ಪಾನ್‌ಕಾರ್ಡ್, 12,450 ವಾಹನ ನೋಂದಣಿನಕಲಿ ಸ್ಮಾರ್ಟ್ ಕಾರ್ಡ್, 3 ಲ್ಯಾಪ್‌ಟಾಪ್, 3 ಪ್ರಿಂಟರ್ ಹಾಗೂ ₹ 67 ಸಾವಿರ ನಗದು ಜಪ್ತಿ ಮಾಡಲಾಗಿದೆ' ಮಾಹಿತಿ ನೀಡಿದರು.

ಮೊನೋಗ್ರಾಮ್ ಬಳಸಿ ಕಾರ್ಡ್ ತಯಾರಿ: ‘ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಮುದ್ರೆಯುಳ್ಳ ಮೊನೋ ಗ್ರಾಮ್‌ಗಳು ಆರೋಪಿಗಳ ಮನೆಗಳಲ್ಲಿ ಸಿಕ್ಕಿವೆ. ಅವುಗಳನ್ನು ಬಳಸಿಕೊಂಡು ಆರೋಪಿಗಳು ಕಾರ್ಡ್ ತಯಾರಿಸುತ್ತಿದ್ದರು’ ಎಂದೂ ಕಮಲ್ ಪಂತ್ ಹೇಳಿದರು.

ಶಾಂತಿನಗರದ ಮಳಿಗೆಯಲ್ಲಿ ಮುದ್ರಣ: ‘ಶಾಂತಿನಗರದಲ್ಲಿರುವ ಬ್ರಿಗೇಡ್ ಪ್ರಿಂಟ್ಸ್ ಮಳಿಗೆಯಲ್ಲಿ ನಕಲಿ ಕಾರ್ಡ್‌ಗಳನ್ನು ಆರೋಪಿಗಳು ಮುದ್ರಿಸುತ್ತಿದ್ದರು. ಅದೇ ಕಾರ್ಡ್‌ಗಳನ್ನು ಆರೋಪಿ ಕಮಲೇಶ್ ಕುಮಾರ್, ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ. ನಂತರ, ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿದ್ದ' ಎಂದು ವಿವರಿಸಿದರು.

‘ಚುನಾವಣಾ ಆಯೋಗಕ್ಕೂ ಮಾಹಿತಿ’:

‘ಆರೋಪಿಗಳ ಬಳಿ ಅಪಾರ ಪ್ರಮಾಣದ ಮತದಾರರ ಗುರುತಿನ ಚೀಟಿಗಳು ಲಭ್ಯವಾಗಿವೆ. ಮುಂಬರುವ ಚುನಾವಣೆಗಳಲ್ಲಿ ನಕಲಿ ಮತದಾನ ಮಾಡಿಸುವ ಉದ್ದೇಶ ಇದರ ಹಿಂದಿರುವಂತೆ ಕಾಣುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಮಾಹಿತಿ ಕಳುಹಿಸಲಿದ್ದೇವೆ’ ಎಂದು ಪೊಲೀಸರು ಹೇಳಿದರು.

ಕದ್ದ ವಾಹನಗಳಿಗೂ ಆರ್‌.ಸಿ:

‘ರಾಜ್ಯದ ಹಲವು ನಗರಗಳಲ್ಲಿ ಕಳ್ಳತನವಾಗಿದ್ದ ವಾಹನಗಳಿಗೂ ಆರೋಪಿಗಳು, ವಾಹನ ನೋಂದಣಿ ಕಾರ್ಡ್ (ಆರ್‌.ಸಿ) ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗುವುದು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT