ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ

ಕೃಷಿ ಕಾಯ್ದೆ ವಾಪಸ್‌ ಪಡೆಯಲು ರೈತರ ಆಗ್ರಹ, ಪ್ರತಿಭಟನೆಗೆ ವಿವಿಧ ಸಂಘಟನೆಗಳ ಬೆಂಬಲ
Last Updated 8 ಡಿಸೆಂಬರ್ 2020, 13:59 IST
ಅಕ್ಷರ ಗಾತ್ರ

ಮಡಿಕೇರಿ: ನೂತನ ಕೃಷಿ ಕಾಯ್ದೆ ವಾಪಸ್‌ ಪಡೆಯುವಂತೆ ಆಗ್ರಹಿಸಿ, ರೈತ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಅನ್ನದಾತರು ವಿವಿಧೆಡೆ ಪ್ರತಿಭಟನೆ ನಡೆಸಿ, ಕೇಂದ್ರ ವಿರುದ್ಧ ಗುಡುಗಿದರು.

ನಗರದ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. ಪೊನ್ನಂಪೇಟೆಯಲ್ಲಿ ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಲಾಯಿತು. ಉಳಿದೆಡೆ ವಾಹನ ಸಂಚಾರ, ವಹಿವಾಟು ನಿತ್ಯದಂತೆಯೇ ಇತ್ತು.

ತಿಮ್ಮಯ್ಯ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾನವ ಸರಪಳಿ ನಿರ್ಮಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ ಅವರ ಮೂಲಕ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ‘ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿಮಾಡುವ ಮೂಲಕ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ನೂತನ ಕಾಯ್ದೆ ತರುವ ಉದ್ದೇಶವೇನು’ ಎಂದು ಅವರು ಪ್ರಶ್ನಿಸಿದರು.
ಕೊಡಗಿನ ಕಾಫಿ, ಕರಿಮೆಣಸು ಬೇರೆಡೆಗೆ ರಫ್ತುಗೊಳ್ಳುತ್ತಿದೆ. ಆದರೂ ದರ ಪಾತಾಳಕ್ಕಿಳಿದಿದೆ‌. ಭ್ರಷ್ಟಾಚಾರ ಎಲ್ಲ ಕಡೆ ತಾಂಡವವಾಡುತ್ತಿದೆ. ದಲ್ಲಾಳಿಗಳನ್ನು ನಿಯಂತ್ರಣ ಮಾಡಲು ಯೋಜನೆ ರೂಪಿಸಬೇಕೇ ಹೊರತು ರೈತ ವಿರೋಧಿ ಕಾಯ್ದೆ ಜಾರಿಗೆ ತರುವುದು ಸರಿಯಲ್ಲ ಎಂದು ಹೇಳಿದರು.

ಕರಿಮೆಣಸಿಗೆ ₹ 500 ಕನಿಷ್ಠ ರಫ್ತು ದರ ನಿಗದಿಯಾಗಿದ್ದರೂ ಕೂಡ ಅದು ಕೈಸೇರುತ್ತಿಲ್ಲ. ವಿಯೆಟ್ನಾಂ ಕರಿಮೆಣಸು ಕೊಡಗು ಮೆಣಸಿನೊಂದಿಗೆ ಮಿಶ್ರಿತವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

‘ರೈತ ಮುಖಂಡರೊಂದಿಗೆ ಚರ್ಚೆ ನಡೆಸಲಿ’

ರೈತ ಮುಖಂಡರನ್ನು ಕರೆಸಿ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಬೇಕು. ಅದನ್ನು ಬಿಟ್ಟು ರೈತರಿಗೆ ಮಾರಕವಾದ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ತರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರಬೇಕು. ಆ ವರದಿಯಲ್ಲಿ ಬೆಳೆಗಳಿಗೆ ಆಗುವ ಖರ್ಚು ವೆಚ್ಚದ ಮಾಹಿತಿಯಿದೆ. ಅದರ ಆಧಾರದಲ್ಲಿ ಎಂಎಸ್‌ಪಿ ನಿಗದಿ ಮಾಡಬೇಕು. ಇದರಿಂದ ರೈತನಿಗೆ ಸೂಕ್ತ ಬೆಂಬಲ ಬೆಲೆ ದೊರಕಲಿದೆ. ಕೇಂದ್ರ ಸರ್ಕಾರ ರೈತಪರ ನಿಲುವು ತೋರಬೇಕು. ಬೆಳೆಗೆ ದರ ನಿಗದಿ ಮಾಡುವವರು ಯಾರು? ಹೇಗೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಮಾತನಾಡಿ, ‘ರೈತ ವಿರೋಧಿ ಕಾಯ್ದೆ. ಕೇಂದ್ರ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ಜಿಡಿಪಿ ಏರಿಕೆಗೆ ರೈತರು ಕಾರಣರಾಗಿದ್ದಾರೆ. ದೇಶದ ಆದಾಯ ಮೂಲವಾಗಿರುವ ಕೃಷಿಗೆ ಸೂಕ್ತ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಬಗ್ಗೆ ನಿರಂತರ ಹೋರಾಟ ರೂಪಿಸಿದರು ಸರ್ಕಾರ ಸ್ಪಂದಿಸುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿಗೆ ಸರ್ಕಾರ ಹಿಂದೇಟೂ ಹಾಕುತ್ತಿದೆ’ ಎಂದು ದೂರಿದರು.

ಕಾಫಿ, ಕರಿಮೆಣಸು ಬೆಲೆ ಕುಸಿದಿದೆ. ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದೇ ಶೋಷಣೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಎಚ್ಚರಿಸಿದರು.

ರೈತ ಮುಖಂಡ ಪುಚ್ಚಿಮಾಡ ಅಶೋಕ್ ಮಾತನಾಡಿ, ‘ರೈತರ ಬಗ್ಗೆ ಅನುಕಂಪ ಇರಲಿ. ರೈತರು ಕೂಡ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದರು.

ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪರಶುರಾಮ್ ಮಾತನಾಡಿ, ಕಾರ್ಮಿಕರು, ದಲಿತರು, ರೈತರ ಮೇಲೆ ನಿರಂತರ ಶೋಷಣೆ ಆಗುತ್ತಿದೆ. ಶ್ರೀಮಂತರ ಪರ ಸರ್ಕಾರ ಕೆಲಸ ಮಾಡುತ್ತಿದೆ. ರೈತರು, ಕಾರ್ಮಿಕರು ಹಾಗೂ ಶ್ರಮಿಕರ ನಂಬಿಕೆ ಕಳೆದುಕೊಂಡಿದೆ. ರೈತ ವಿರೋಧಿ ನಡೆ ಬಿಡದಿದ್ದರೆ, ಕ್ರಾಂತಿ ಆಗಲಿದೆ ಎಂದು ಎಚ್ಚರಿಸಿದರು.

ಜಮಾತ್ ಇಸ್ಲಾಮಿ ಹಿಂದ್ ಅಧ್ಯಕ್ಷ ಹನೀಫ್ ಮಾತನಾಡಿ, ಕಾಯ್ದೆ ಕಾರ್ಪೋರೆಟ್ ಕಂಪನಿಗಳ ಪರವಿದೆ. ರೈತರ ಬೆನ್ನೆಲುಬು ಮುರಿಯುವ ಕೆಲಸವಿದು ಎಂದು ದೂರಿದರು.

ಪ್ರತಿಭಟನೆಯಲ್ಲಿ ಪುಚ್ಚಿಮಾಡ ಸುಭಾಷ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಂಬ ಕಾರ್ಯಪ್ಪ, ಮುಖಂಡರಾದ ಪುಚ್ಚಿಮಾಡ ಅಶೋಕ್, ಮಹೇಶ್, ತೀತ್ರಮಾಡ ರಾಜ, ಅಶೋಕ್, ಗಿರೀಶ, ದಿನೇಶ್, ಚೆಪ್ಪುಡೀರ ರೋಶನ್, ಎಂ.ಬಿ ಅಶೋಕ್, ರಮೇಶ್, ದಿನೇಶ್, ಗಾಣಗಂಡ ಉತ್ತಯ್ಯ, ಕಾಯಮಂಡ ಡಾಲಿ, ಜಯಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT