ಹಾಸನ: ಅರಕಲಗೂಡು ತಾಲ್ಲೂಕಿನ ಬಸವನ ಹಳ್ಳಿ ಪಡುವಲಹಿಪ್ಪೆ ರಸ್ತೆ ತಿರುವಿನಲ್ಲಿ ಶನಿವಾರ ತಡರಾತ್ರಿ ವಿಷಕಾರಿ ರಾಸಾಯನಿಕ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ , ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಲಾರಿ ಚಾಲಕ ಪುಟ್ಟರಾಜು, ಪರಮೇಶ್, ಪ್ರಮೋದ ಮೃತರು.
ಮೈಸೂರಿನಿಂದ ಹಾಸನದ ಹಿಮತ್ ಸಿಂಗ್ ಬಟ್ಟೆ ಕಾರ್ಖಾನೆಗೆ ವಿಷಕಾರಿ ಪೌಡರ್ ಚೀಲಗಳು, ಕೆಮಿಕಲ್ ಬಾಕ್ಸ್ ಗಳನ್ನು ಹೊತ್ತು ತರುತ್ತಿದ್ದ ಲಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮಗುಚಿದೆ.
ಲಾರಿ ಬೆಂಕಿ ಹೊತ್ತಿ ಉರಿದಿದೆ. ಲಾರಿಯಡಿ ಸಿಲುಕಿ ಪ್ರಮೋದ್, ಪರಮೇಶ್ ಸ್ಥಳದಲ್ಲೇ ಮೃತಪಟ್ಟರೆ, ಪುಟ್ಟರಾಜು ಆಸ್ಪತ್ರೆಯಲ್ಲಿ ಅಸುನೀಗಿದರು. ಘಟನೆಯಲ್ಲಿ ಲಾರಿ ಸಂಪೂರ್ಣ ಸುಟ್ಟು ಹೋಗಿದೆ.