ಬೆಂಗಳೂರು: ಕೃಷ್ಣಾ ನದಿ ಪಾತ್ರದಲ್ಲಿ ನಿರಂತರ ಪ್ರವಾಹಕ್ಕೆ ತುತ್ತಾಗುವ 100 ಗ್ರಾಮಗಳಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡುವ ಕೇಂದ್ರೀಕೃತ ಮಾಹಿತಿ ಪ್ರಸಾರ ವ್ಯವಸ್ಥೆಯನ್ನು ಪೈಲಟ್ ಯೋಜನೆಯಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಹೇಳಿದರು.
‘ಬೆಳಗಾವಿ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಜಾರಿ ಮಾಡಲಾಗಿದೆ. ಬೆಂಗಳೂರಿನಿಂದಲೇ ಈ ವ್ಯವಸ್ಥೆ ನಿಯಂತ್ರಿಸಲಾಗುತ್ತದೆ. ಇದರ ಜಾರಿಗೆ ₹95 ಲಕ್ಷ ಖರ್ಚಾಗಿದೆ’ ಎಂದು ತಿಳಿಸಿದರು.
ಈಗಾಗಲೇ ಯೋಜನೆ ಜಾರಿಯಾಗಿದ್ದು, ಗ್ರಾಮಸ್ಥರಿಗೆ ಹವಾಮಾನ ಮಾಹಿತಿಯಲ್ಲದೆ, ಗುಡುಗು, ಮಿಂಚು, ಪ್ರವಾಹ, ಭೂಕುಸಿತ ಮತ್ತು ಇತರ ತುರ್ತು ಸನ್ನಿವೇಶಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗುತ್ತದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಯೋಜನೆಯನ್ನು ಜಾರಿ ಮಾಡಿದ್ದು, ನಿರ್ವಹಣೆಯನ್ನೂ ಮಾಡುತ್ತಿದೆ.
ಈ ಯೋಜನೆಯನ್ನು ಮೊದಲ ಹಂತದಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ಆರಂಭಿಸಲಾಗಿದೆ. ಈ ಪ್ರದೇಶವು ನಿರಂತರ ಪ್ರವಾಹಕ್ಕೆ ತುತ್ತಾಗುತ್ತಿರುವುದೇ ಮುಖ್ಯ ಕಾರಣ. ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ತಲಾ ನಾಲ್ಕು ಸ್ಪೀಕರ್ಗಳನ್ನು ಅಳವಡಿಸಲಾಗಿದ್ದು, ಸಂದೇಶಗಳು ನಾಲ್ಕೂ ದಿಕ್ಕಿಗೆ ಕೇಳಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮನೋಜ್ ವಿವರಿಸಿದರು.