ರಾಯಚೂರು/ಯಾದಗಿರಿ: ಕೃಷ್ಣಾನದಿಯಲ್ಲಿ ಪ್ರವಾಹ ಮಟ್ಟ ಯಥಾಸ್ಥಿತಿಯಿದ್ದು, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಮತ್ತು ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆಗಳು ವಾರದಿಂದ ಮುಳುಗಡೆಯಾಗಿವೆ.
ಯಾದಗಿರಿ ಜಿಲ್ಲೆಯ ನದಿ ತೀರದಲ್ಲಿಯ ಭತ್ತದ ಗದ್ದೆಗಳಲ್ಲಿ ಒಡ್ಡುಗಳು ಮಾತ್ರ ಕಾಣುತ್ತಿವೆ. ಬೆಳೆ ಕೊಳೆತು ನಾಶವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ವಡಗೇರಾ ತಾಲ್ಲೂಕಿನ ಕದರಾಪುರ ಗ್ರಾಮದ ಮೀನುಗಾರರ 33 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ನೀರಿನ ಪ್ರಮಾಣದಲ್ಲಿ ಇಳಿಕೆ (ಬೆಳಗಾವಿ ವರದಿ): ಕೆಲವು ದಿನಗಳಿಂದ ಮಹಾರಾಷ್ಟ್ರ ಮತ್ತು ಗಡಿ ಭಾಗದಲ್ಲಿ ಮಳೆ ಬಹುತೇಕ ಕಡಿಮೆಯಾಗಿದ್ದು, ಆ ರಾಜ್ಯದಿಂದ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲೂ ಇಳಿಕೆಯಾಗಿದೆ.
ಮಹಾರಾಷ್ಟ್ರದ ಕಡೆಯಿಂದ 2.85 ಲಕ್ಷ ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ಶುಕ್ರವಾರ 3.04 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಮುಳುಗಡೆ ಸ್ಥಿತಿಯಲ್ಲಿರುವ ಚಿಕ್ಕೋಡಿ ಭಾಗದ 9 ಸೇತುವೆಗಳಲ್ಲಿ ಕೆಲವು ಸೇತುವೆಗಳು ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಚಿಕ್ಕೋಡಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲ್ಲೂಕುಗಳ ನದಿ ತೀರದ ಗ್ರಾಮಗಳು ಜಲಾವೃತ ಸ್ಥಿತಿಯಲ್ಲೇ ಇವೆ.
ತಗ್ಗಿದ ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿಸಾಧಾರಣ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ ಒಟ್ಟು15.37 ಮಿ.ಮೀ. ಮಳೆಯಾಗಿದೆ. ಹೊಸನಗರದಲ್ಲಿ 28.80 ಮಿ.ಮೀ, ತೀರ್ಥಹಳ್ಳಿಯಲ್ಲಿ 45.40 ಮಿ.ಮೀ, ಸಾಗರದಲ್ಲಿ 18.60 ಮಿ.ಮೀ, ಸೊರಬದಲ್ಲಿ 2.40 ಮಿ.ಮೀ, ಶಿವಮೊಗ್ಗದಲ್ಲಿ 9.80 ಮಿ.ಮೀ ಮಳೆಯಾಗಿದೆ.