ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ ಸಂತ್ರಸ್ತರ ಸೂರಿಗೆ ಅನುದಾನದ ಬರ: ವಿಶೇಷ ವರದಿ

ತುರ್ತಾಗಿ ₹ 1,000 ಕೋಟಿ ಬಿಡುಗಡೆಗೆ ಬೇಡಿಕೆ l ನೆರವಿಗಾಗಿ ಕಾಯುತ್ತಿರುವ ಲಕ್ಷಾಂತರ ಫಲಾನುಭವಿಗಳು
Last Updated 7 ಡಿಸೆಂಬರ್ 2022, 20:24 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಹ ಮತ್ತು ಅತಿ ವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪುನಃ ಸೂರು ನಿರ್ಮಿಸಿ ಕೊಳ್ಳಲು ನೆರವು ನೀಡುವ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ. ಈ ಯೋಜನೆಗೆ ₹ 2,634.97 ಕೋಟಿ ಅನುದಾನ ಬೇಕಿದ್ದು, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಬಳಿ ಲಭ್ಯವಿರುವುದು ಕೇವಲ
₹ 2 ಕೋಟಿ!

2019ರಿಂದ 2022ರವರೆಗೆ ಮಳೆ ಮತ್ತು ಪ್ರವಾಹದಿಂದ 3.03 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ಹಾಗೂ ಹೆಚ್ಚಿನ ಹಾನಿಯಾದ ಮನೆಗಳ ಪುನರ್‌ ನಿರ್ಮಾಣಕ್ಕೆ ಹಾಗೂ ಭಾಗಶಃ ಹಾನಿಯಾದ ಮನೆಗಳ ದುರಸ್ತಿಗೆ ನೆರವು ನೀಡಲು ಒಟ್ಟು ₹ 5,009.33 ಕೋಟಿ ಬೇಕಿದೆ. ಮೊದಲ ಮೂರು ವರ್ಷಗಳ ಅವಧಿಯಲ್ಲಿ ₹ 2,374.36 ಕೋಟಿ ಮಾತ್ರ ಬಿಡುಗಡೆಯಾಗಿದೆ.

2022ರಲ್ಲಿ 71,038 ಮನೆಗಳಿಗೆ ಹಾನಿಯಾಗಿದ್ದು, ಮೊದಲ ಕಂತನ್ನು ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ (ಎನ್ ಡಿಆರ್‌ಎಫ್‌) ಮತ್ತು ರಾಜ್ಯ ವಿಕೋಪ ಪರಿಹಾರ ನಿಧಿ (ಎಸ್‌ಡಿ ಆರ್‌ಎಫ್‌) ಅನುದಾನದ ಅಡಿಯಲ್ಲಿ ಕಂದಾಯ ಇಲಾಖೆಯಿಂದ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.

ಉಳಿದ ಕಂತುಗಳನ್ನು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಪಾವತಿಸಬೇಕಿದೆ. ಉಳಿದ ಕಂತುಗಳ ಪಾವತಿಗೆ ₹ 1,106.22 ಕೋಟಿಯನ್ನು ನಿಗಮಕ್ಕೆ ಒದಗಿಸಬೇಕಿದೆ.

ಅಡಿಪಾಯ, ಗೋಡೆ, ಛಾವಣಿ ಹಾಗೂ ಕಾಮಗಾರಿ ಪೂರ್ಣಗೊಂಡಾಗ ಹಾಗೂ ಶೌಚಾಲಯ ನಿರ್ಮಾಣದ ವೆಚ್ಚವನ್ನು ಐದು ಕಂತುಗಳಲ್ಲಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಸಾವಿರಾರು ಫಲಾನುಭವಿಗಳಿಗೆ ಎರಡು, ಮೂರು, ನಾಲ್ಕನೇ ಕಂತಿನ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಅರ್ಧಂಬರ್ಧ ಕಾಮಗಾರಿ ಮುಗಿಸಿ, ದೀರ್ಘಕಾಲದಿಂದ ಅನುದಾನ ಬಿಡು ಗಡೆಗೆ ಕಾಯುತ್ತಿರುವ ಹಲವರು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಕೇಂದ್ರ ಕಚೇರಿಗೂ ಬರು ತ್ತಿದ್ದಾರೆ.

‘ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣ ಯೋಜನೆಯ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತಾವಗಳು ಬೃಹತ್‌ ಸಂಖ್ಯೆಯಲ್ಲಿ ಬಾಕಿ ಇವೆ. ಆದರೆ, ಈ ಯೋಜನೆಯ ಲೆಕ್ಕಶೀರ್ಷಿಕೆ ಅಡಿ ಲಭ್ಯವಿರುವುದೇ ₹ 2 ಕೋಟಿ’ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

₹ 1,000 ಕೋಟಿಗೆ ಬೇಡಿಕೆ: ವಿವಿಧ ಕಂತುಗಳ ಅನುದಾನ ಬಳಕೆ ಮಾಡಿರುವ ಫಲಾನುಭವಿಗಳಿಗೆ ಮುಂದಿನ ಕಂತು ಪಾವತಿಸಲು ತಕ್ಷಣವೇ ₹ 1,000 ಕೋಟಿ ಅನು ದಾನ ಒದಗಿಸುವಂತೆ ನಿಗಮ ಹಲವು ದಿನಗಳ ಹಿಂದೆಯೇ ಕಂದಾಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಪ್ರವಾಹ, ಮಳೆಯಿಂದ ಹಾನಿಯಾದ ಮನೆಗಳ ಪುನರ್‌ನಿರ್ಮಾಣ, ದುರಸ್ತಿಗೆ 2019–20ರಿಂದ 2022–23ರವರೆಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಒಟ್ಟು ₹ 3,580.30 ಕೋಟಿ ವೆಚ್ಚ ಮಾಡಲಾಗಿದೆ. ನಿಗಮಕ್ಕೆ ₹ 300 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ. ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ.ಶೀಘ್ರದಲ್ಲಿ ಈ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದುಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಆಯುಕ್ತ ಆರ್‌. ಮನೋಜ್‌ ತಿಳಿಸಿದರು.

--

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಬೇಕಿರುವ ಅನುದಾನದ ವಿವರ

ವರ್ಷ; ಮನೆಗಳ ಸಂಖ್ಯೆ ;ನಿಗಮಕ್ಕೆ ಬೇಕಾದ ಮೊತ್ತ(₹ಕೋಟಿಗಳಲ್ಲಿ); ಬಿಡುಗಡೆ; ವೆಚ್ಚ ;ಬಾಕಿ

2019–20;1,39,755;2,316.52;1,775.17;1,775.17;541.35

2020–21;39,171;571.50;355.51;355.51;215.99

2021–22;53,745;1,015.09;243.68;241.68;771.41

2022–23;71,038;1,106.22;00.00;00.00;1,106.22
ಒಟ್ಟು;3,03,709;5,009.33;2,374.36;2,372.36;2,634.96


ಜಿಲ್ಲಾಧಿಕಾರಿಗಳ ಬಳಿಯಲ್ಲೂ ಹಣವಿಲ್ಲ

ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ, ದುರಸ್ತಿಗೆ ಮೊದಲ ಕಂತಿನ ಅನುದಾನವನ್ನು ಜಿಲ್ಲಾಧಿಕಾರಿ ಕಚೇರಿಗಳಿಂದ ಬಿಡುಗಡೆ ಮಾಡಲಾಗುತ್ತಿದೆ. ಕೆಲವೆಡೆ ಜಿಲ್ಲಾಧಿಕಾರಿಗಳ ಬಳಿಯೂ ಹಣದ ಕೊರತೆ ಎದುರಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳು, ತಕ್ಷಣವೇ ಅನುದಾನ ಒದಗಿಸುವಂತೆ ಕೋರಿದ್ದಾರೆ.

‘ತಕ್ಷಣ ಅನುದಾನ ಬಿಡುಗಡೆಗೆ ಕ್ರಮ’

‘ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ನಮ್ಮ ಸರ್ಕಾರವು ದೇಶದಲ್ಲೇ ಅತ್ಯಧಿಕ ನೆರವು ನೀಡುತ್ತಿದೆ. ಮಾಹಿತಿ ಸಲ್ಲಿಸುವಲ್ಲಿನ ಲೋಪ ಸೇರಿದಂತೆ ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆ ತಡವಾಗಿರಬಹುದು. ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು ಸರಿಯಾದ ರೀತಿಯಲ್ಲಿ ಮಾಹಿತಿ ಒದಗಿಸಿದರೆ ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT