ಬೈಂದೂರು (ಉಡುಪಿ): ಕಿರಿಮಂಜೇಶ್ವರ ಸಮೀಪದ ಕೊಡೇರಿಯಿಂದ ಭಾನುವಾರ ಮೀನುಗಾರಿಕೆಗೆ ತೆರಳಿದ್ದ ದೋಣಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿದ್ದು, ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.
ಮಂಜುನಾಥ್ ಕಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ್ ಖಾರ್ವಿ ಹಾಗೂ ನಾಗರಾಜ ಖಾರ್ವಿ ಕಣ್ಮರೆಯಾದವರು. ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ನಾಪತ್ತೆಯಾದವ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಕರಾವಳಿಯಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕಡಲು ಪ್ರಕ್ಷುಬ್ಧಗೊಂಡು ಅಲೆಗಳ ಉಬ್ಬರ ಹೆಚ್ಚಾಗಿದೆ. ಇದನ್ನು ಲೆಕ್ಕಿಸದೆ ಸಾಗರ್ ಶ್ರೀ ಹೆಸರಿನ ದೋಣಿಯಲ್ಲಿ 11 ಮೀನುಗಾರರು ಸಮುದ್ರಕ್ಕಿಳಿದಿದ್ದರು. ಈ ಸಂದರ್ಭ ದೋಣಿ ಪಲ್ಪಿಯಾಗಿದ್ದು, 7 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.