ಬೆಂಗಳೂರು: ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡು ಬ್ಯಾಂಕ್ಗೆ ವಂಚಿಸಿದ್ದ ಆರೋಪದಲ್ಲಿ ವಿಜಯಪುರದ ಐಸಿಐಸಿಐ ಬ್ಯಾಂಕ್ ಕ್ಲಸ್ಟರ್ ವ್ಯವಸ್ಥಾಪಕ ವಿಜಯಸಾರಥಿ ವಿರುದ್ಧ ದೂರು ದಾಖಲಿಸಿರುವ ಜಾರಿ ನಿರ್ದೇಶನಾಲಯ(ಇ.ಡಿ), ₹12.11 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
ವಂಚನೆ ಆರೋಪದಲ್ಲಿ ನಾಲ್ಕು ಎಫ್ಐಆರ್ ದಾಖಲಿಸಿಕೊಂಡಿದ್ದವಿಜಯಪುರ ಪೊಲೀಸರು, ನಂತರ ಸಿಐಡಿಗೆ ಪ್ರಕರಣ ವರ್ಗಾವಣೆ ಮಾಡಿದ್ದರು. ತನಿಖೆ ಪೂರ್ಣಗೊಳಿಸಿದ ಬೆಂಗಳೂರಿನ ಸಿಐಡಿ ಪೊಲೀಸರು, ವಿಜಯಪುರ ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಜಯಸಾರಥಿ ಮತ್ತು ಬ್ಯಾಂಕ್ನ ಮತ್ತೊಬ್ಬ ನೌಕರ ಸಚಿನ್ ಅಣ್ಣಪ್ಪ ಪಾಟೀಲ ಸೇರಿಕೊಂಡು ರದ್ದಾದ ಚೆಕ್, ಬಳಕೆಯಾದ ಚೆಕ್ ಮರು ಬಳಕೆ ಮಾಡಿಕೊಂಡು ₹70.44 ಕೋಟಿ ವಂಚಿಸಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಪೊಲೀಸರು ತಿಳಿಸಿದ್ದರು.