ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಗಮ ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳಿಸದಿರಿ’

ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರಿಗೆ ಗೀತ ಗೌರವ
Last Updated 30 ಮಾರ್ಚ್ 2021, 18:47 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತ್ಯ ಲೋಕಕ್ಕೂಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬಹಳ ಕೊಡುಗೆ ನೀಡಿದ್ದಾರೆ. ಕೇವಲ ಸುಗಮ ಸಂಗೀತ ಕ್ಷೇತ್ರಕ್ಕೆಅವರನ್ನು ಸೀಮಿತಗೊಳಿಸಬಾರದು’ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು.

ಸಂಗೀತ ಧಾಮ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದಭಾವಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ‘ಗೀತ ಗೌರವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಕ್ಷ್ಮೀನಾರಾಯಣ ಭಟ್ಟರು ಹಲವು ಪ್ರಮುಖ ಸಾಹಿತ್ಯಗಳ ಭಾಷಾಂತರದಲ್ಲೂ ಮೇಲುಗೈ ಸಾಧಿಸಿದ್ದರು. ಇದು,ಅವರಲ್ಲಿದ್ದ ಕಾವ್ಯ ಕುತೂಹಲ ಮತ್ತು ಭಾಷಾಂತರ ಪ್ರತಿಭೆಗಳಿಗೆ ನಿದರ್ಶನ. ಭಟ್ಟರ ಅನುವಾದದಿಂದ ಕನ್ನಡ ಕಾವ್ಯ ಸಮೃದ್ಧಗೊಂಡಿದೆ’ ಎಂದರು.

‘ಇಂತಹ ವ್ಯಕ್ತಿಯನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳಿಸದೆ, ಸಾಹಿತ್ಯ ಲೋಕದಲ್ಲಿನ ಅವರ ಪಾತ್ರವನ್ನೂ ಪರಿಚಯಿಸುವ ಕೆಲಸವನ್ನು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಮಾಡಬೇಕು’ ಎಂದು ಒತ್ತಾಯಿಸಿದರು.

ಗಾಯಕ ವೈ.ಕೆ.ಮುದ್ದುಕೃಷ್ಣ, ‘‌ಭಟ್ಟರು ಸುಗಮ ಸಂಗೀತಕ್ಕೆ ದೊಡ್ಡ ಪರಿಕಲ್ಪನೆ ಸೃಷ್ಟಿಸಿದವರು. ಇಲ್ಲದಿದ್ದರೆ, ಅನೇಕರಿಗೆ ಹಾಡುವ ಅವಕಾಶಗಳು ಸಿಗುತ್ತಿರಲಿಲ್ಲ.ಭಟ್ಟರಿಗೆ ಸೌಂದರ್ಯ ಪ್ರಜ್ಞೆಯೂ ಹೆಚ್ಚಾಗಿತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ, `ವಾಷ್ ರೂಂ ಎಲ್ಲಿದೆ' ಎಂದು ಕೇಳಿಕೊಂಡು ಹೋಗಿ, ತಲೆಬಾಚಿಕೊಂಡು, ಮುಖಕ್ಕೆ ಪೌಡರ್ ಹಚ್ಚಿಕೊಂಡು ಅಚ್ಚುಕಟ್ಟಾಗಿ ತಯಾರಾಗಿ ಬರುತ್ತಿದ್ದರು' ಎಂದು ಅವರಲ್ಲಿನ ಸೌಂದರ್ಯ ಪ್ರಜ್ಞೆಯನ್ನು ನೆನಪಿಸಿದರು.

ಗೀತ ಗಾಯನದಲ್ಲಿ ಕೆ.ಎಸ್.ಸುರೇಖಾ, ಮೃತ್ಯುಂಜಯ ದೊಡ್ಡವಾಡ, ಸುಪ್ರಿಯಾ ರಘುನಂದನ್, ಸೃಷ್ಟಿ ನಾಡಿಗ್, ಇಂಚರ ಪ್ರವೀಣ್‍ಕುಮಾರ್ ಸೇರಿದಂತೆ ಹಲವು ಗಾಯಕರು ಹಾಗೂ ಸಂಗೀತ ಧಾಮದ ವಿದ್ಯಾರ್ಥಿಗಳು ಲಕ್ಷ್ಮೀನಾರಾಯಣ ಭಟ್ಟರ ರಚನೆಯ ಗೀತೆಗಳನ್ನು ಹಾಡಿದರು.ವಿಮರ್ಶಕ ಎಚ್.ಎಸ್.ಸತ್ಯನಾರಾಯಣ ನುಡಿನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT